ಮಲ್ಪೆ-ಹೆಬ್ರಿ ಟೋಲ್ ರಹಿತ ರಾ.ಹೆದ್ದಾರಿ-ಸಚಿವೆ ಶೋಭಾ ಕರಂದ್ಲಾಜೆ
ಉಡುಪಿ: ರಾಜ್ಯದಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಟೋಲ್ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಮಲ್ಪೆಯಿಂದ ಹೆಬ್ರಿಗೆ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ನೇರ ಕೇಂದ್ರದ ವ್ಯವಸ್ಥೆಯಲ್ಲಿದ್ದು ಟೋಲ್ ಇಲ್ಲದೆ ನಿರ್ಮಾಣವಾಗುವ ರಸ್ತೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶುಕ್ರವಾರ 369 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಬ್ರಿ – ಪರ್ಕಳ – ಕರಾವಳಿ ಬೈಪಾಸ್ – ಮಲ್ಪೆ ಎನ್ಎಚ್ 169 ಎ ಚತುಷ್ಪಥ ರಸ್ತೆಗೆ ಪೆರ್ಡೂರು ದೇವಸ್ಥಾನ ಬಳಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
‘ಮೀನುಗಾರಿಕಾ ಕೇಂದ್ರ ಹಾಗೂ ಪ್ರವಾಸಿ ತಾಣವಾದ ಮಲ್ಪೆ ರಸ್ತೆ ಅಗಲೀಕರಣವಾಗಬೇಕು ಎಂಬುವುದು ಬಹಳ ವರ್ಷಗಳ ಬೇಡಿಕೆ. ಇದೀಗ ಬೇಡಿಕೆ ಪೂರ್ಣಗೊಂಡಿದೆ. ಈಗಾಗಲೇ ಪರ್ಕಳದಿಂದ ಉಡುಪಿಯ ರಸ್ತೆ ಚುತುಷ್ಪತ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಹೆಬ್ರಿ-ಆಗುಂಬೆ ರಸ್ತೆಯನ್ನು ಕೂಡ ಅಭಿವೃದ್ಧಿ ಮಾಡು ಕುರಿತು ಯೋಜನೆ ನಿರ್ಮಿಸಲಾಗುವುದು. ದೇಶದ ಪ್ರಧಾನಿ ನರೇಂದ್ರ ಮೋದಿಗೆ ಹಾಗೂ ನಿತಿನ್ ಘಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಬೇಡಿಕೆ ಇಟ್ಟ ಎಲ್ಲಾ ರಸ್ತೆಗಳಿಗೆ ಅತೀ ಶೀಘ್ರ ಅನುದಾನ ಬಿಡುಗಡೆಯಾಗಿದೆ ಎಂದರು.
ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ ಈ ಭಾಗದ ಸಂಸದೆ ಕೇಂದ್ರ ಸಚಿವೆಯಾಗಿರುವ ಕರಂದ್ಲಾಜೆಯವರ ವಿಶೇಷ ಪರಿಶ್ರಮದಿಂದ ಹೆಬ್ರಿ ಮಲ್ಪೆ ರಸ್ತೆ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ ಉಪಸ್ಥಿತರಿದ್ದರು.