ಕುಂದಾಪುರ: ನವರಾತ್ರಿ ದೇಣಿಗೆ ಸಂಗ್ರಹಣೆ ವಿಚಾರ ಸಂಬಂಧಿಕನಿಗೆ ಹಲ್ಲೆ
ಶಂಕರನಾರಾಯಣ ಸೆ.30(ಉಡುಪಿ ಟೈಮ್ಸ್ ವರದಿ) ನವರಾತ್ರಿ ಪೂಜೆಯ ದೇಣಿಗೆ ಸಂಗ್ರಹಣೆ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಹಲ್ಲೆಗೊಳಗಾದ ರಂಜಿತ್ ಶೆಟ್ಟಿ ಅವರು ತಮ್ಮ ಪರಿಚಯದ ನಾಲ್ಕು ಮಂದಿಯ ವಿರುದ್ಧ ದೂರು ನೀಡಿದ್ದಾರೆ. ಅದರಂತೆ ಅಂಪಾರು ಗ್ರಾಮದ ಅಂಪಾರು ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಪೂಜೆಯ ದೇಣಿಗೆ ಹಣವನ್ನು ಅಜಿತ್ ಕುಲಾಲ್ ಎಂಬಾತನಲ್ಲಿ ನೀಡುವಂತೆ ವಾಟ್ಟಾಪ್ ಗ್ರೂಪನಲ್ಲಿ ಸಂದೇಶ ಹಾಕಲಾಗಿತ್ತು. ಇದಕ್ಕೆ ಪ್ರತಿಯಾಗಿ ರಂಜಿತ್ ಶೆಟ್ಟಿ ಅವರು ದೇವರಿಗೆ ನೀಡುವ ಹಣವನ್ನು ಯಾವುದೇ ವ್ಯಕ್ತಿಯ ಹತ್ತಿರ ನೀಡುವ ಅವಶ್ಯಕತೆ ಇಲ್ಲ, ಕಾಣಿಕೆ ಡಬ್ಬಿಗೆ ಹಾಕಿದರು ಸಹ ಹೋಗುತ್ತದೆ ಎಂದು ಮೆಸೇಜ್ ಹಾಕಿದ್ದರು. ಆದ್ದರಿಂದ ಆರೋಪಿಗಳು ಕೋಪಗೊಂಡಿದ್ದರು. ಆದ್ದರಿಂದ ಇಂದು ಬೆಳಿಗ್ಗೆ ರಂಜಿತ್ ಶೆಟ್ಟಿ ಅವರು ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಅಂಪಾರು ಆಟೋರಿಕ್ಷಾ ನಿಲ್ದಾಣದಲ್ಲಿ ಇರುವಾಗ ಅಲ್ಲಿಗೆ ಬೈಕ್ ನಲ್ಲಿ ಬಂದ ಆರೋಪಿ ಅಜಿತ್ ಕುಲಾಲ್ ಹಾಗೂ ಸಂಕೇತ್ ಕುಲಾಲ್ ರಂಜಿತ್ ಅವರನ್ನು ತಡೆದು ನಿಲ್ಲಿಸಿ ಬೈದು ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ಆರೋಪಿಗಳಾದ ನಾಗರಾಜ ಪೂಜಾರಿ ಕೂಡಾ ಹಲ್ಲೆ ಮಾಡಿದ್ದು ಈತನಿಗೆ ಉಮೇಶ ಕೊಠಾರಿ ಎಂಬಾತ ಹಲ್ಲೆ ನಡೆಸಲು ಪ್ರಚೋದನೆ ಮಾಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಾಗೂ ಹಲ್ಲೆಯಿಂದ ಗಾಯಗೊಂಡ ರಂಜಿತ್ ಶೆಟ್ಟಿ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.