ರಾಜ್ಯ ಕಾಂಗ್ರೆಸ್ ಗೆ ಇಂದಿನಿಂದ ರಾಹುಕಾಲ ಆರಂಭ- ಬಿಜೆಪಿ
ಬೆಂಗಳೂರು: ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಆರಂಭವಾಗಿರುವಂತೆಯೇ, ಕಾಂಗ್ರೆಸ್ ಗೆ ಇಂದಿನಿಂದ ರಾಹುಕಾಲ ಆರಂಭವಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ ಜೋಡೊ ಯಾತ್ರೆಯಲ್ಲ, ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು ಎಂದು ಆರೋಪಿಸಿದೆ.
ಅಪರಾಧ ಸೂಚ್ಯಂಕದ ಪ್ರಕಾರ ತಮಿಳುನಾಡು 422.1 ಕೇರಳ -401. 4, ರಾಜಸ್ಥಾನ 269.6, ಕರ್ನಾಟಕ 172.8 ರಷ್ಟಿದೆ. ರಾಹುಲ್ ಗಾಂಧಿ ಅವರೇ ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದೆ.
ರಾಹುಲ್ ಗಾಂಧಿ ಅವರೇ ದಲಿತರಿಗೆ ಸುರಕ್ಷಿತವಾಗಿರುವ ಕರ್ನಾಟಕಕ್ಕೆ ಸ್ವಾಗತ, ಕಾಂಗ್ರೆಸ್ ಆಡಳಿತದ ರಾಜಸ್ಥಾನದಲ್ಲಿ ದಲಿತರಿಗೆ ರಕ್ಷಣೆ ನೀಡಿ ಒತ್ತಾಯಿಸಿದೆ. ಕರ್ನಾಟಕದಲ್ಲಿ ನಿರುದ್ಯೋಗ ದರ 3.5 ರಷ್ಟಿದ್ದು, ಅಳಿದುಳಿದಿರುವ ಕಾಂಗ್ರೆಸ್ ಆಡಳಿತದ ರಾಜ್ಯದ ಯುವಕರಿಗೆ ಉದ್ಯೋಗ ನೀಡುವತ್ತ ಗಮನ ಹರಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ