ಹೂಡೆ: ಸಮುದ್ರಪಾಲಾಗಿದ್ದ ಮಣಿಪಾಲದ ವಿದ್ಯಾರ್ಥಿಯ ಮೃತದೇಹ ಪತ್ತೆ

ಮಲ್ಪೆ, ಸೆ.26: ನಿನ್ನೆ ಸಂಜೆ ಹೂಡೆ ಬೀಚ್ ನಲ್ಲಿ ಸಮುದ್ರಪಾಲಾಗಿದ್ದ ಮಣಿಪಾಲದ ವಿದ್ಯಾರ್ಥಿ ಶ್ರೀಕರ್ ರವರ ಮೃತದೇಹ ಇಂದು ಬೆಳಗಿನ ಜಾವ ಸಮುದ್ರ ತೀರದಲ್ಲೇ ಪತ್ತೆಯಾಗಿದೆ.

ಹೈದರಾಬಾದ್ ಮೂಲದ ವಿದ್ಯಾರ್ಥಿ ಶ್ರೀಕರ್ (21) ಎಂದು ಮೃತಪಟ್ಟವರು.

ಮಣಿಪಾಲದ ಐಸಿಎಎಸ್ ನ ಒಟ್ಟು 15 ಮಂದಿ ವಿದ್ಯಾರ್ಥಿಗಳು ನಿನ್ನೆ ಸಂಜೆ ಹೂಡೆ ಬೀಚ್ ಗೆ ಹೋಗಿದ್ದರು. ಸಮುದ್ರದಲ್ಲಿ ಆಡುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಿಲುಕಿ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈ ಪೈಕಿ ಬೆಂಗಳೂರು ಮೂಲದ ನಿಶಾಂತ್(21) ಹಾಗೂ ಷಣ್ಮುಗ (21) ಎಂಬವರನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿತ್ತಾದರೂ, ತೀವ್ರ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ  ಇಬ್ಬರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು.

ಇನ್ನು ನಾಪತ್ತೆಯಾದ ವಿದ್ಯಾರ್ಥಿಗಾಗಿ ತಡರಾತ್ರಿವರೆಗೂ ಹುಡುಕಾಟ ಮುಂದುವರಿಸಲಾಗಿತ್ತು, ಆದರೆ ಇಂದು ಬೆಳಗ್ಗೆ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!