ಬೈಂದೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ- ಪತಿ ಮೃತ್ಯು, ಪತ್ನಿ ಗಂಭೀರ

ಬೈಂದೂರು ಸೆ.21(ಉಡುಪಿ ಟೈಮ್ಸ್ ವರದಿ): ತಾಲೂಕಿನ ಯಡ್ತರೆ ಜಂಕ್ಷನ್ ನಲ್ಲಿ ದ್ವಿಚಕ್ರವಾಹನಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದೆ.  

ಜಗದೀಶ್ ಪಟ್ವಾಲ್ ಮೃತಪಟ್ಟವರು.ನಿನ್ನೆ ಯಡ್ತರೆ ಜಂಕ್ಷನ್ ನಲ್ಲಿ ಜಗದೀಶ್ ಪಟ್ವಾಲ್ ರವರು ಅವರ ಹೆಂಡತಿ ಆಶಾರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಬಿಜೂರು ಕಡೆಯಿಂದ ಬಂದು ಕೊಲ್ಲೂರು ರಸ್ತೆ ಕಡೆಗೆ ಹೋಗುವ ಸಲುವಾಗಿ ರಸ್ತೆ ದಾಟುತ್ತಿದ್ದ ವೇಳೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಸವಾರ ಮಹಮ್ಮದ್ ಇಬ್ರಾಹಿಂ ಎಂಬಾತ ಜಗದೀಶ್ ಪಟ್ವಾಲ್ ರವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದ ಜಗದೀಶ್ ಪಟ್ವಾಲ್ ಹಾಗೂ ಅವರ ಪತ್ನಿ ಆಶಾ ಅವರು ಗಾಯಗೊಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ಆಶಾ ಅವರನ್ನು ದಾಖಲಿಸಿಕೊಂಡಿದ್ದು, ಗಂಭೀರ ಗಾಯಗೊಂಡಿದ್ದ ಜಗದೀಶ್ ಪಟ್ವಾಲ್ ರವರನ್ನು ಪರೀಕ್ಷಿಸಿ ವೈದ್ಯರು ಅವರು ದಾರಿ ಮದ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂಬುದಾಗಿ ಬಿ.ಸುರೇಶ್ ನಾಯ್ಕ ಎಂಬವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!