ಉದ್ಯಾವರ: ಸ್ನೇಹಿತರೊಳಗೆ ಹೊಯೈಕೈ- ದೂರು ಪ್ರತಿದೂರು ದಾಖಲು
ಕಾಪು ಸೆ.4(ಉಡುಪಿ ಟೈಮ್ಸ್ ವರದಿ): ಕಳೆದುಕೊಂಡಿದ್ದ ಸ್ನೇಹವನ್ನು ಮರಳಿ ಪಡೆಯುವ ವಿಚಾರದಲ್ಲಿ ಇಬ್ಬರ ನಡುವೆ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿ ಕಾಪು ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ಉದ್ಯಾವರದ ಸಂಪಿಗೆ ನಗರ ನಿವಾಸಿ ಪೂರ್ಣೇಶ್ ಎಂಬವರು ಪೊಲೀಸರಿಗೆ ನೀಡಿದ ದೂರಿನಂತೆ, ಪೂರ್ಣೇಶ್ ಹಾಗೂ ಅವರ ಸ್ನೇಹಿತನಾದ ರಾಯನ್ ರೋಷನ್ ಮುರ್ಯನಿಗೂ ಎರಡು ವರ್ಷದ ಹಿಂದೆ ರಾಯನ್ ರೋಷನ್ ಮುರ್ಯ, ಧನುಷ್ ಎಂಬವನ ಸ್ನೇಹ ಮಾಡಿದ ವಿಚಾರವಾಗಿ ಜಗಳವಾಗಿದ್ದು, ಆ ಬಳಿಕ ಇಬ್ಬರು ಮಾತುಕತೆ ಬಿಟ್ಟಿದ್ದರು. ನಿನ್ನೆ ಸಂಜೆ ಪೂರ್ಣೇಶ್ ಅವರಿಗೆ ಕರೆ ಮಾಡಿದ ರಾಯನ್ ರೋಷನ್ ಮುರ್ಯ ನಮ್ಮ ಸ್ನೇಹ ಸರಿಮಾಡಿಕೊಳ್ಳುವ ಸಲುವಾಗಿ ಉದ್ಯಾವರದ ಸಂಪಿಗೆ ನಗರ ಎಂಬಲ್ಲಿಗೆ ಬರುವಂತೆ ತಿಳಿಸಿದ್ದರು.
ಅದರಂತೆ ಪೂರ್ಣೇಶ್ ಅವರು ತಮ್ಮ ಸ್ನೇಹಿತನಾದ ವರ್ಷಿತ್ ಎಂಬವರೊಂದಿಗೆ ಉದ್ಯಾವರದ ಸಂಪಿಗೆ ನಗರ ಜಂಕ್ಷನ್ ಬಳಿ ನಿಂತಿರುವಾಗ ರಾಯನ್ ರೋಷನ್ ಮುರ್ಯ ಮತ್ತು ಧನುಷ್ ರವರು ಬೈಕ್ ಒಂದರಲ್ಲಿ ಬಂದು, ಕಬ್ಬಿಣದ ರಾಡನಿಂದ ಏಕಾಏಕಿ ತಲೆಗೆ ಹಲ್ಲೆ ನೆಡೆಸಿದ್ದಾರೆ. ಇದರಿಂದ ತಲೆಗೆ ತೀವೃ ರಕ್ತಗಾಯವಾಗಿರುತ್ತದೆ. ಹಲ್ಲೆ ತಪ್ಪಿಸಲು ಬಂದ ಸ್ನೇಹಿತ ವರ್ಷಿತ್ ರಿಗೆ ಕೂಡ ಕೈಯಿಂದ ಹಲ್ಲೆ ನಡೆಸಿದ್ದಾಗಿ ತಿಳಿಸಲಾಗಿದೆ.
ಇದೇ ಘಟನೆ ಗೆ ಸಂಬಂಧಿಸಿ ಪಿತ್ರೋಡಿಯ ನಿವಾಸಿ,
ರಾಯನ್ ರೋಷನ್ ಮುರ್ಯ ಅವರು ಪ್ರತಿ ದೂರು ನೀಡಿದ್ದು, ಅದರಂತೆ, ಸೆ.3 ರಂದು ರಾಯನ್ರೋಷನ್ ಮುರ್ಯ ಅವರು ತಮ್ಮ ಸ್ನೇಹಿತ ಧನುಷ್ ರವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪಿತ್ರೋಡಿಯಿಂದ ಸಂಪಿಗೆ ನಗರ ಕಡೆಗೆ ಹೋಗುವಾಗ ಪೂರ್ಣೇಶ್ ಗೆ ಕರೆಮಾಡಿ ಸಂಪಿಗೆ ನಗರ ಜಂಕ್ಷನ್ ಬಳಿ ಬಾ, ನಿನ್ನ ಬಳಿ ಮಾತನಾಡಲು ಇದೇ ಎಂದು ಹೇಳಿದ್ದರು.
ಅದರಂತೆ ರಾಯನ್ ರೋಷನ್ ಮುರ್ಯ ಹಾಗೂ ಧನುಷ್ ಸಂಪಿಗೆ ನಗರ ಜಂಕ್ಷನ್ ಬಳಿ ಸಂಜೆ ತಲುಪಿದಾಗ ಜಂಕ್ಷನ್ನಲ್ಲಿ ಪೂರ್ಣೇಶ್ ಮತ್ತು ಆತನ ಸ್ನೇಹಿತ ವರ್ಷಿತ್ ಮಾತನಾಡಿಕೊಂಡು ನಿಂತಿದ್ದು, ಈ ವೇಳೆ ರಾಯನ್ ರೋಷನ್ ಮುರ್ಯ ಅವರು ಮಾತನಾಡಲು ಹೋದಾಗ ಪೂರ್ಣೇಶ್ ನಿನ್ನ ಸ್ನೇಹ ನನಗೆ ಬೇಕಾಗಿಲ್ಲ” ಎಂದು ಅವಾಚ್ಯ ಶಬ್ದದಿಂದ ಬೈದು ಬೈಕ್ ನ್ನು ದೂಡಿ ಹಾಕಿದ ಪರಿಣಾಮ ರಾಯನ್ ರೋಷನ್ ಮುರ್ಯ ಅವರು ಬಿದ್ದು ಗಾಯ ಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಈ ಎರಡೂ ಘಟನೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.