ಕಾರ್ಕಳ: ಕೌಟುಂಬಿಕ ಕಲಹ?-ಟೆಂಪೋ ಚಾಲಕ ನೇಣಿಗೆ ಶರಣು

ಕಾರ್ಕಳ: ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆಜೆಡ್ಡು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ನೀರೆಯ ಜೆಡ್ಡು ನಿವಾಸಿ ಆನಂದ ಶೆಟ್ಟಿ(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೃತ್ತಿಯಲ್ಲಿ ಟೆಂಪೋ ಚಾಲಕರಾಗಿದ್ದ ಆನಂದ ಶೆಟ್ಟಿ ಸಾಕಷ್ಟು ಸ್ಥಿತಿವಂತರಾಗಿದ್ದರು. ಆನಂದ ಶೆಟ್ಟಿ ಹಾಗೂ ಅವರ ಪತ್ನಿಯ ಸಹೋದರನ ನಡುವಿನ ವೈಮನಸ್ಸಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಪದೇಪದೇ ಜಗಳವಾಗುತ್ತಿತ್ತು ಎನ್ನಲಾಗಿದ್ದು, ಇತ್ತೀಚೆಗೆ ಇದೇ ವಿಚಾರವಾಗಿ ಆನಂದ ಶೆಟ್ಟಿ ಹಾಗೂ ಅವರ ಪತ್ನಿಯ ಸಹೋದರನ ನಡುವೆ ಜಗಳವಾಗಿ ಆನಂದ ಶೆಟ್ಟಿಯವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.

ಇದಲ್ಲದೇ ಕೌಟುಂಬಿಕ ಕಲಹ ನಡುವೆಯೂ ಆನಂದ ಶೆಟ್ಟಿಯವರ ಪತ್ನಿ ತವರು ಮನೆಯವರ ಬೆಂಬಲಕ್ಕೆ ನಿಂತು ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಆನಂದ ಶೆಟ್ಟಿ ಪತ್ನಿಯ ವಿರುದ್ದ ಕೂಡ ಬೇಸರಗೊಂಡಿದ್ದರು ಎನ್ನಲಾಗಿದೆ. ಶನಿವಾರ ಆನಂದ ಶೆಟ್ಟಿಯವರ ಮಾವನ ಮನೆಯಲ್ಲಿ ರಾತ್ರಿ ಕಾರ್ಯಕ್ರಮದ ನಿಮಿತ್ತ ಅವರ ಪತ್ನಿ ಹೋಗಿದ್ದವೇಳೆ ಆನಂದ ಶೆಟ್ಟಿ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಆನಂದ ಶೆಟ್ಟಿ ಡೆತ್ ನೋಟ್ ಬರೆದಿಟ್ಟಿದ್ದರು ಎನ್ನಲಾಗಿದ್ದು ಪೊಲೀಸರು ಅದನ್ನು ವಶಪಡಿಸಿಕೊಂಡು ಆತ್ಮಹತ್ಯೆಗೆ ನಿಖರ ಕಾರಣದ ಕುರಿತು ತನಿಖೆ ನಡೆಸಿದರೆ ನಿಜಾಂಶ ಹೊರಬರಬಹುದು. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!