ಕೊಲ್ಲೂರು: ಟ್ಯಾಕ್ಸಿ ನಿಲ್ದಾಣದ ಗಲಾಟೆ ವಿಚಾರ-ಪ್ರತಿ ದೂರು ದಾಖಲು

ಕೊಲ್ಲೂರು ಆ.13 (ಉಡುಪಿ ಟೈಮ್ಸ್ ವರದಿ): ವಾಹನಕ್ಕೆ ಸೈಡ್ ಬಿಡುವ ವಿಚಾರಕ್ಕೆ ಸಂಬಂಧಿಸಿ ಕೊಲ್ಲೂರು ಟ್ಯಾಕ್ಸಿ ನಿಲ್ದಾಣದ ಸಮೀಪ ನಡೆದ ಗಲಾಟೆ ವಿಚಾರವಾಗಿ ಕೊಲ್ಲೂರು ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ನಿವಾಸಿ ಪ್ರವೀಣ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಆ.11 ರಂದು ಸಂಜೆ ಪ್ರವೀಣ ಅವರು ಜಗದೀಶ ರವರ ಮಗನನ್ನು ಕಾರಿನಲ್ಲಿ ಕೊಲ್ಲೂರು ಪ್ರಾಥಮಿಕ ಶಾಲೆಯಿಂದ ಕರೆತರಲು ಹೋಗುತ್ತಿದ್ದಾಗ ಆರೋಪಿ ವಿನೋದ್ ಹೆಬ್ಬಾರ್ ಎಂಬುವನು ಕಾರಿನಲ್ಲಿ ಬಂದು ಅವಾಚ್ಯವಾಗಿ ಬೈದು ಗಾಡಿಯನ್ನು ಬದಿಗೆ ಹಾಕು ಎಂದು ಹೋಗಿರುತ್ತಾನೆ. ಬಳಿಕ ಸಂಜೆ 4.30 ರ ಸುಮಾರಿಗೆ ಪ್ರವೀಣ ರವರ ಮೊಬೈಲ್ ಗೆ ಕರೆ ಮಾಡಿ ಬಸ್ ನಿಲ್ದಾಣಕ್ಕೆ ಬಾ ಎಂದು ಕರೆದಿದ್ದಾನೆ.

ಅದರಂತೆ ಪ್ರವೀಣ ಅವರು ಜಗದೀಶರವರೊಂದಿಗೆ ಕೊಲ್ಲೂರು ಟ್ಯಾಕ್ಸಿ ನಿಲ್ದಾಣ ಹಿಂಬದಿ ಇದ್ದಾಗ ವಿನೋದ್ ಹೆಬ್ಬಾರ್ ಮತ್ತು ಸಂದೀಪ್ ಒಂದು ಕಾರಿನಲ್ಲಿ ಹಾಗೂ ಚಂದ್ರ ಶೆಟ್ಟಿ ಎಂಬುವನು ಇನ್ನೊಂದು ಕಾರಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ತುಳಿದು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಪ್ರವೀಣ ಅವರು ಧರಿಸಿದ್ದ ಚಿನ್ನದ ಸರವನ್ನು ಬಲವಂತವಾಗಿ ಎಳೆದುಕೊಂಡು, ಅವರ ಬಳಿ ಇದ್ದ 6,300 ರೂ. ನ್ನು ಕಸಿದುಕೊಂಡು ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದರೆ ಸಂದೀಪ್ ಮುಖಾಂತರ ಠಾಣೆಯಲ್ಲಿ ದೂರನ್ನು ನೀಡುತ್ತೇನೆಂದು ನಿಂದಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!