ಕೊಲ್ಲೂರು: ವಾಹನಕ್ಕೆ ಸೈಡ್ ಕೊಡುವ ವಿಚಾರ ಯುವಕರಿಬ್ಬರಿಗೆ ಜಾತಿ ನಿಂದನೆಗೈದು ಬೆದರಿಕೆ
ಕೊಲ್ಲೂರು ಆ.13 (ಉಡುಪಿ ಟೈಮ್ಸ್ ವರದಿ): ವಾಹನಕ್ಕೆ ಸೈಡ್ ಕೊಡುವ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದು ಯುವಕರಿಬ್ಬರಿಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ,ಬೆದರಿಕೆ ಹಾಕಿರುವುದಾಗಿ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಲ್ಲೂರಿನ ಬಾಳೆ ಗದ್ದೆ ನಿವಾಸಿ ಸಂದೀಪ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಆ.11 ರಂದು ಸಂಜೆ ವೇಳೆ ಸಂದೀಪ್ ಅವರು ವಿನೋದ್ ಹೆಬ್ಬಾರ್ ರವರೊಂದಿಗೆ ಕಾರಿನಲ್ಲಿ ಹೆಗ್ಡಹಕ್ಲು ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿರುವಾಗ ಸೊಸೈಟಿ ಗುಡ್ಡೆ ಬಳಿ ಪ್ರವೀಣ್ ಯಾನೆ ಗೂಳಿ ಎಂಬಾತ ಕಾರನ್ನು ಚಲಾಯಿಸಿಕೊಂಡು ಎದುರಿಗೆ ಬಂದು ಸೈಡ್ ಕೊಡುವ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹೋಗಿರುತ್ತಾರೆ.
ಬಳಿಕ ಪ್ರವೀಣ್ ನು ವಿನೋದ್ ಹೆಬ್ಬಾರ್ ರವರಿಗೆ ಕರೆ ಮಾಡಿ ಕೊಲ್ಲೂರು ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಬರಲು ಹೇಳಿದ್ದ. ಈ ಹಿನ್ನೆಲೆಯಲ್ಲಿ ಸಂದೀಪ್ ಹಾಗೂ ವಿನೋದ್ ಹೆಬ್ಬಾರ್ ರವರು ಸಂಜೆ 7-25 ರ ವೇಳೆಗೆ ಟ್ಯಾಕ್ಸಿ ಸ್ಟ್ಯಾಂಡ್ ಗೆ ಬಂದಾಗ ಆರೋಪಿತರಾದ ಪ್ರವೀಣ್ ಯಾನೆ ಗೂಳಿ, ಜಗ್ಗ ಯಾನೆ ಜಗದೀಶ, ಕಿರಣ್ ಜೋಗಿ ಯಾನೆ ಸ್ಟಿಗು ಜೊತೆಯಲ್ಲಿದ್ದು ಈ ವೇಳೆ ಗಾಡಿ ಸೈಡ್ ಕೊಡುವ ವಿಚಾರದಲ್ಲಿ ಮತ್ತೆ ಮಾತಿನ ಜಗಳವಾಗಿದೆ. ಹಾಗೂ ಆರೋಪಿತರ ಪೈಕಿ ಪ್ರವೀಣನು ಕಾರಿನಲ್ಲಿ ಬಂದ ತಕ್ಷಣ ನೀನು ದೊಡ್ಡ ಜನ ಆಗುವುದಿಲ್ಲ. ಯಾವತ್ತು ನೀನು ಕೊರಗ ಕೊರಗನೇ ಎಂದು ಹೇಳಿ ದೇವಸ್ಥಾನದಲ್ಲಿ ಜಪ ಮಾಡಿದ ತಕ್ಷಣ ಭಟ್ ಆಗುವುದಿಲ್ಲ ಎಂದು ಹೇಳಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲದೆ ಮತ್ತಿಬ್ಬರು ಆರೋಪಿಗಳು ಮುಂದಕ್ಕೆ ಕೊಲ್ಲೂರಿನಲ್ಲಿ ಇರಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.