ಲಕ್ಷಾಂತರ ಜನ‌ರ ಮೂಲಕ ಹೌದು ಹುಲಿಯಾ ಬೊಬ್ಬೆ ಹಾಕಿಸಿ, ಪಪ್ಪುವನ್ನು ಬೆಚ್ಚಿ ಬೀಳಿಸುವ ಲೆಕ್ಕಾಚಾರ- ಬಿಜೆಪಿ ಟ್ವೀಟ್

ಬೆಂಗಳೂರು, ಜು 23: ಸಿದ್ದರಾಮೋತ್ಸವ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, “ಇದೊಂದು ವ್ಯವಸ್ಥಿತ ಪೊಲಿಟಿಕಲ್ ಟೂಲ್ ಕಿಟ್ ಆಗಿದ್ದು ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯ ಅವರ ಉದ್ದೇಶ ” ಎಂದು ಹೇಳಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ಸಿದ್ದರಾಮೋತ್ಸವ ಎನ್ನುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬಣದ ಪೊಲಿಟಿಕಲ್ ಟೂಲ್ ಕಿಟ್! ಇದೊಂದು ವ್ಯವಸ್ಥಿತವಾದ ರಾಜಕೀಯ ಗುಪ್ತಮಾರ್ಗಸೂಚಿಯ ಭಾಗ, ಮೂಲ ಕಾಂಗ್ರೆಸಿಗರ ಸರ್ವನಾಶವೇ ಇದರ ಉದ್ದೇಶ” ಎಂದು ಆರೋಪಿಸಿದೆ.

“ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯಇದಕ್ಕಾಗಿಯೇ ರಾಹುಲ್‌ಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಲಕ್ಷಾಂತರ ಜನ‌ರ ಮೂಲಕ ಹೌದು ಹುಲಿಯಾ ಎಂದು ಬೊಬ್ಬೆ ಹಾಕಿಸಿ, ಪಪ್ಪುವನ್ನು ಬೆಚ್ಚಿ ಬೀಳಿಸುವುದು ಸಿದ್ದು ಬಣದ ಲೆಕ್ಕಾಚಾರ” ಎಂದು ಬಿಜೆಪಿ ಹೇಳಿದೆ.

“ಸಿದ್ದರಾಮಯ್ಯ ಅವರಿಗೆ 75 ತುಂಬುವುದು ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಎದುರಾಗುತ್ತಿರುವುದು ಕಾಕತಾಳೀಯವಲ್ಲ.ಇದೊಂದು ವ್ಯವಸ್ಥಿತ ಪೊಲಿಟಿಕಲ್ ಟೂಲ್ ಕಿಟ್. ಖರ್ಗೆ, ಪರಮೇಶ್ವರ, ಡಿಕೆಶಿ, ಎಂ.ಬಿ.ಪಾಟೀಲ್ ಸೇರಿದಂತೆ ಮೂಲ ಕಾಂಗ್ರೆಸ್ಸಿಗರನ್ನು ಹೇಗೆ ಮಟ್ಟ ಹಾಕಬೇಕೆಂಬುದೇ ಇದರ ರಹಸ್ಯ ಕಾರ್ಯಸೂಚಿ” ಎಂದು ಹೇಳಿದೆ.

ಇಷ್ಟು ವರ್ಷಗಳ‌ ಕಾಲ ಅಧಿಕೃತವಾಗಿ ಜನ್ಮದಿನಾಚರಣೆಯನ್ನೇ ಆಚರಿಸಿಕೊಳ್ಳದ ಸಿದ್ದರಾಮಯ್ಯ ಹೇಗೆ ಅಮೃತಮಹೋತ್ಸವದ ಪ್ರಸ್ತಾವನೆ ಒಪ್ಪಿಕೊಂಡರು?ಪ್ರಯೋಜನ ಅಥವಾ ಲಾಭಾಕಾಂಕ್ಷೆ ಇಲ್ಲದೇ ದಡ್ಡನೂ ಹೆಜ್ಜೆ ಬದಲಾಯಿಸಲಾರ. ಅಂಥದರಲ್ಲಿ ಸಿದ್ದರಾಮಯ್ಯ ತಮ್ಮ ಉತ್ಸವದ ಮೂಲಕ ರಾಜಕೀಯ ಲಾಭ ಪಡೆಯದೇ ಬಿಡುತ್ತಾರೆಯೇ? ಎಂದು ಪ್ರಶ್ನಿಸಿದೆ.

Leave a Reply

Your email address will not be published. Required fields are marked *

error: Content is protected !!