ಜನರ ಊಟಕ್ಕೆ ತೊಂದರೆಯಾಗದ ರೀತಿಯಲ್ಲಿ ಯೋಚಿಸಿ ಕೆಲಸ ಮಾಡಿ : ಸಾಮಾನ್ಯರ ಅಳಲು ಕೇಳಿ

ಸನ್ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ….
ನಾನಿಂದು ಸಂಜೆ ಅಗತ್ಯ ಔಷಧಗಳಿಗಾಗಿ ಉದ್ಯಾವರ (ಉಡುಪಿ) ಆಸ್ಪತ್ರೆ ಪಕ್ಕದ ಮೆಡಿಕಲ್ ಗೆ ಹೋದೆ. ವಾಪಾಸು ಊರಿಗೆ (ಮೂಡುಬೆಳ್ಳೆ) ಬರುವಾಗ ಮಾರ್ಗದಲ್ಲಿ ಜೀವನದ ಅವಶ್ಯಕತೆಯಾಗಿದ್ದ ಅಕ್ಕಿ ಬೇಕಿದ್ದು ಎರಡು ಊರುಗಳಲ್ಲಿನ ಎರಡು ಅಂಗಡಿಗಳಿಗೆ ಹೋದೆ. ನಾನು ಹೋದ ಎರಡೂ ಅಂಗಡಿಗಳಲ್ಲೂ “ಅಕ್ಕಿ ಮುಗಿದಿದೆ, ಇನ್ನು ತಂದು ಆಗಬೇಕು” ಎಂಬ ಉತ್ತರ ಕೊಟ್ಟರು.
ಮೂರು ಮೆಡಿಕಲ್ ಶಾಪ್ ಗೆ ಹೋಗಿ ಸ್ಯಾನಿಟೈಸರ್ ಕೇಳಿದೆ. ಮೂರೂ ಮೆಡಿಕಲ್ ನವರೂ “ಇಲ್ಲ” ಎಂದರು.

“ಕರ್ನಾಟಕ ಕರ್ಫ್ಯು” ಘೋಷಿಸಿದ್ದೀರಿ. ಇದಕ್ಕೆ ನನ್ನ ಸ್ವಾಗತ ಖಂಡಿತಾ ಇದೆ. ಕಳೆದ ಮೂರು ದಿನ ಮನೆಯಲ್ಲೇ ಇದ್ದ ನಾನು, ಇಂದು ಔಷಧ ಹಾಗೂ ಅಕ್ಕಿಗಾಗಿ ಉದ್ಯಾವರದ ವರೆಗೆ ಹೋಗುವ ಅನಿವಾರ್ಯತೆ ಉದ್ಭವಿಸಿತು, ಬೈಕ್ ಇತ್ತು. ಹೋಗಿ ಬಂದೆ.ಕರ್ನಾಟಕ ಕರ್ಫ್ಯೂ ಗೆ ಪ್ರಧಾನಿಗಳು ಹಾಗೂ ಮುಖ್ಯಮಂತ್ರಿಗಳು ಖಡಕ್ ಆದೇಶ ಹೊರಡಿಸಿದರೆಂದೂ ಟಿವಿ ಛಾನೆಲ್ ಗಳಲ್ಲಿ ನಿಮ್ಮನ್ನು ಹಾಡಿ ಹೊಗಳಲಾಗುತ್ತದೆ. ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ಪೇಟೆಗೆ ಬಂದವರ ಮೇಲೆ ಒಲೀಸರು ಲಾಠಿ ಬೀಸಿದ್ರು, ಇದನ್ನು ಸಂಭ್ರಮಿಸುತ್ತಲೇ, ಜನಸಾಮಾನ್ಯರನ್ನು ಟಿವಿ ನಿರೂಪಕರು ಬಾಯಿಗೆ ಬಂದಂತೆ ಬೈದು ಧನ್ಯತೆ ಅನುಭವಿಸಿದರು.

ನಾನು ನಿಮ್ಮಲ್ಲಿ ಹೇಳಬಯಸುವುದು ಇಷ್ಟೆ. ಕರ್ಫ್ಯೂಗೆ ಆದೇಶ ಕೊಡುವುದು, ಕರ್ಫ್ಯೂಗೆ ಖಡಕ್ ವಾರ್ನಿಂಗ್ ಮಾಡುವುದು ದೊಡ್ಡ ವಿಷಯವೇ ಅಲ್ಲ. ಒಂದು ಖಡಕ್ ಆದೇಶದಿಂದಾಗಿ ಬಡಜನರು ತಮ್ಮ ಬದುಕುವ ಹಕ್ಕಿಗಾಗಿ ಯಾವೆಲ್ಲ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ನೀವ್ಯಾರೂ ಯಾಕೆ ಯೋಚಿಸುವುದಿಲ್ಲ ? ಇಂಥ ಸಮಸ್ಯೆಗಳ ಪರಿಹಾರಕ್ಕೆ ಬೇಕಾದ ಕಾರ್ಯ ಯೋಜನೆಗಳನ್ನು ಯಾಕಾಗಿ ಅತ್ಯಂತ ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ?

ಒಂದು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು, ಗ್ರಾಮೀಣ ಭಾಗದ ದೇವಸ್ಥಾನದ ಬ್ರಹ್ಮಕಲಶವನ್ನು ಸಹ ಅತ್ಯಂತ ಸುವ್ಯವಸ್ಥಿತವಾಗಿ ಮಾಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಐವತ್ತಕ್ಕೂ ಅಧಿಕ ಇಲಾಖೆಗಳು ಕೇಂದ್ರ, ರಾಜ್ಯ, ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಇರುವಾಗ ನಿಮಗೆ ಯಾಕೆ ಕರ್ನಾಟಕ ಕರ್ಫ್ಯೂ ನಂಥವುಗಳನ್ನು ಬಡಬಜನರಿಗೆ ಒಂದು ಹೊತ್ತಿನ ಊಟಕ್ಕೆ ತೊಂದರೆಯಾಗದಂತೆ ಜ್ಯಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ?

ಭಾಷಣವೇ ಆಡಳಿತವಲ್ಲ. ಭಾಷಣದಿಂದ ಆಡಳಿತ ಮಾಡಲು ಸಾಧ್ಯವೂ ಇಲ್ಲ. ಭಾಷಣ ಬೇಕಾದರೆ ದಿನಾ ರಾತ್ರಿ 8 ಗಂಟೆಗೆ ಮಾಡಿ. ನಮ್ಮ ವಿರೋಧ ಇಲ್ಲ. ಭಾಷಣದಲ್ಲಿ ಬಿಟ್ಟ್ಟಿ ಉಪದೇಶದ ಜೊತೆಗೆ ಜನರ ಊಟಕ್ಕೆ ತೊಂದರೆಯಾಗದ ರೀತಿಯಲ್ಲಿ ಸ್ವಲ್ಪವಾದರೂ ಯೋಚಿಸಿ ಕೆಲಸ ಮಾಡಿ. ಸಾಧ್ಯವೇ ನಿಮ್ಮಿಂದ ?
✍️ ಶ್ರೀರಾಮ ದಿವಾಣ

1 thought on “ಜನರ ಊಟಕ್ಕೆ ತೊಂದರೆಯಾಗದ ರೀತಿಯಲ್ಲಿ ಯೋಚಿಸಿ ಕೆಲಸ ಮಾಡಿ : ಸಾಮಾನ್ಯರ ಅಳಲು ಕೇಳಿ

  1. ಬಡ ಜನರ ಬದುಕಿನ ಬಗ್ಗೆ ಸಧ್ಯ ಯಾವ ಯೋಜನೆ ಹಾಕಿಕೊಂಡಿದ್ದೀರಾ ? ಯಾಕೆಂದರೆ ಕೊರೋನಕ್ಕಿಂತಲೂ ಭೀಕರ ಹೊಟ್ಟೆ ಹಸಿವು.

Leave a Reply

Your email address will not be published. Required fields are marked *

error: Content is protected !!