ತಪ್ಪಿದ ಕೊನೆಯ ಹಡಗು; ಐಲ್ಯಾಂಡ್‌ನಲ್ಲಿ ರಾತ್ರಿ ಕಳೆದ ಪ್ರವಾಸಿಗರು

ಉಡುಪಿ: ಕೇರಳದ ಕೊಚ್ಚಿ ಮೂಲದ ನಾಲ್ವರು ಪ್ರವಾಸಿಗರು ಶನಿವಾರ ರಾತ್ರಿ ಪೂರ್ತಿ ಮಲ್ಪೆಯ ಸೇಂಟ್‌ ಮೇರಿಸ್‌ ಐಲ್ಯಾಂಡ್‌ನಲ್ಲಿ ಕಳೆದಿದ್ದಾರೆ. ಸಂಜೆ ದ್ವೀಪದಿಂದ ಪ್ರವಾಸಿಗರನ್ನು ತೀರಕ್ಕೆ ಕರೆತರುವ ಕೊನೆಯ ಬೋಟ್‌ ತಪ್ಪಿದ ಪರಿಣಾಮ ಪ್ರವಾಸಿಗರು ರಾತ್ರಿ ದ್ವೀಪದಲ್ಲಿಯೇ ಉಳಿಯಬೇಕಾಯಿತು.

ಭಾನುವಾರ ಬೆಳಿಗ್ಗೆ ಐಲ್ಯಾಂಡ್‌ಗೆ ಪ್ರವಾಸಿಗರನ್ನು ಕರೆದೊಯ್ದ ಬೋಟ್‌ ಸಿಬ್ಬಂದಿಗೆ ಅಲ್ಲಿದ್ದ ಕೇರಳ ಪ್ರವಾಸಿಗರು ಕಂಡಿದ್ದಾರೆ. ಬಳಿಕ ಅವರನ್ನು ತೀರಕ್ಕೆ ಕರೆತಂದು ಮಲ್ಪೆ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಪ್ರವಾಸಿಗರನ್ನು ಕೇರಳಕ್ಕೆ ಕಳುಹಿಸಿದ್ದಾರೆ.

ಘಟನೆಯ ವಿವರ: ಜಸ್ಟಿನ್ (34), ಶೀಜಾ (33), ಜೋಶ್ (28) ಹಾಗೂ ಹರೀಶ್ (17) ನ.23ರಂದು ಮಧ್ಯಾಹ್ನ ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್‌ ಐಲ್ಯಾಂಡ್‌ಗೆ ತೆರಳಿದ್ದರು. ದ್ವೀಪದಲ್ಲೆಲ್ಲ ಸುತ್ತಾಡಿದ ಬಳಿಕ ಸಮೀಪದಲ್ಲಿದ್ದ ಚಿಕ್ಕ ದ್ವೀಪಕ್ಕೆ ಹೋಗಿದ್ದರು.

ಸಂಜೆ ಅಲ್ಲಿ ನೀರಿನಮಟ್ಟ ಏರಿಕೆಯಾಗಿದ್ದರಿಂದ ದ್ವೀಪ ದಾಟಲು ಸಾಧ್ಯವಾಗದೆ ಅಲ್ಲಿಯೇ ಉಳಿದುಕೊಂಡಿದ್ದರು. ಇದರ ಮಧ್ಯೆ ಪ್ರವಾಸಿಗರನ್ನು ವಾಪಸ್‌ ಕರೆತರುವ ಕೊನೆಯ ಬೋಟ್ ಸಂಜೆ 6:45ಕ್ಕೆ ದ್ವೀಪದಿಂದ ತೀರಕ್ಕೆ ಮರಳಿದ ಪರಿಣಾಮ ಪ್ರವಾಸಿಗರು ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ದ್ವೀಪದಲ್ಲಿ ರಾತ್ರಿಯ ಹೊತ್ತು ಪ್ರವಾಸಿಗರು ತಂಗಲು ಅವಕಾಶವಿಲ್ಲ. ಹಾಗಾಗಿ, ಯಾವ ಉದ್ದೇಶಕ್ಕೆ ಉಳಿದುಕೊಂಡಿದ್ದರು ಎಂದು ವಿಚಾರಣೆ ನಡೆಸಲಾಯಿತು. ಬೋಟ್‌ ಟಿಕೆಟ್‌, ರೈಲು ಟಿಕೆಟ್‌, ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಕೇರಳಕ್ಕೆ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!