ಸ್ಪಯಂ ಪ್ರೇರಿತವಾಗಿ ‘ಜನತಾ ಕರ್ಪ್ಯೂ’, ಪೊಲೀಸರು ಪ್ರಕರಣ ದಾಖಲಿಸುವುದಿಲ್ಲ: ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂ ಹಿನ್ನಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಪೊಲೀಸರ ಕಾರ್ಯನಿರ್ವಹಣೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ತುರ್ತು ಸಭೆ ನಡೆಸಿದರು.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ , ನಗರ ಪೊಲೀಸ್ ಆಯುಕ್ತ ಕಮಿಷನರ್ ಭಾಸ್ಕರ್ ರಾವ್ ಮತ್ತು ಎಲ್ಲ ಡಿಸಿಪಿಗಳು ಭಾಗಿಯಾಗಿದ್ದು, ಕರ್ಪ್ಯೂಗೆ ಸಂಬಂಧಪಟ್ಟಂತೆ ಗೃಹಸಚಿವರು ಮಾಹಿತಿ ಪಡೆದರು.

ಸಭೆಯಲ್ಲಿ ಮನೆಯಿಂದ ಹೊರಗಡೆ ಬಂದರೆ ಪ್ರಕರಣ ದಾಖಲಿಸುತ್ತೇವೆ ಎಂಬ ಬೆಂಗಳೂರು ಪೊಲೀಸ್ ಆಯುಕ್ತ ಬಾಸ್ಕರ್ ರಾವ ಹೇಳಿಕೆ ಹಿನ್ನೆಲೆಯಲ್ಲಿ ಅವರಿಂದ ಸ್ಪಷ್ಟನೆ ಪಡೆದ ಗೃಹಸಚಿವರು, “ಹೀಗೆ ಪ್ರಕರಣ ದಾಖಲಿಸಲು ಅವಕಾಶ ಇದೆಯಾ..? ಜನರಿಗೆ ಭಯಹುಟ್ಟಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಏಕೆ? ಎಂದು ಪ್ರಶ್ನಿಸಿದರು.

ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲಿ ಇರುವುದು ಜನತಾ ಕರ್ಫ್ಯೂ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಗಮನದಲ್ಲಿಟ್ಟುಕೊಂಡು ಕರ್ಪ್ಯೂಗೆ ಕರೆ ನೀಡಿದ್ದಾರೆ. ಜನತಾ ಕರ್ಪ್ಯೂ ಆಚರಿಸುವ ಜನತೆಗೆ ಪೊಲೀಸ್ ಇಲಾಖೆ ಸಹಕರಿಸಬೇಕೇ ವಿನಃ ಈ ರೀತಿಯಾಗಿ ಗೊಂದಲ ಸೃಷ್ಟಿಸಿ ಭಯಬೀಳಿಸುವ ಹೇಳಿಕೆಗಳನ್ನು ಯಾರೂ ಸಹ ನೀಡಬಾರದು. ಗೊಂದಲ ಸೃಷ್ಟಿಸಬಾರದು ಎಂದು ತಾಕೀತು ಮಾಡಿದರು.

 ಸಭೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಎಲ್ಲಾ ಪೋಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಮುಂದಿನ ಎರಡು ವಾರ ಜಾಗ್ರತೆವಹಿಸುವಂತೆ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಇದಕ್ಕೆ ನಾವು ಸಿದ್ಧರಾಗಿರಬೇಕು. ನೆರೆ ರಾಜ್ಯಗಳ ಗಡಿಗಳನ್ನು ಬಂದ್ ಮಾಡದೇ ಸ್ಕ್ರೀನಿಂಗ್ ಮಾಡುತ್ತೇವೆ. ಜನರ ಕರ್ಪ್ಯೂ ನೋಡಿಕೊಂಡು ಮೂರು ದಿನಗಳ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದರು. ಪ್ರಧಾನಿ ಅವರು ವೈದ್ಯರು ಮತ್ತು ಪೊಲೀಸರನ್ನು ಮೊದಲು ರಕ್ಷಿಸಬೇಕೆಂದು ಕರೆ ನೀಡಿದ್ದಾರೆ.

ಹೀಗಾಗಿ ಪೊಲೀಸರು ಸೆನೆಟೈಸರ್, ಮಾಸ್ಕ್, ಹಾಕಿಕೊಳ್ಳಬೇಕು. ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ಮಾಡಿದ್ದೇನೆ. ಕೇರಳ, ಆಂಧ್ರಪ್ರದೇಶ ತೆಲಂಗಾಣ, ಮಹಾರಾಷ್ಟ್ರ ಗಡಿ ಭಾಗದಲ್ಲಿ ನಿಗಾ, ಮತ್ತು ಸ್ಕ್ರೀನಿಂಗ್ ಮಾಡಬೇಕಾಗಿದೆ. ಯಾರ ಮೇಲೂ ಪ್ರಕರಣ ದಾಖಲಿಸುವುದಿಲ್ಲ. ಜನತೆ ಸ್ವಯಂಪ್ರೇರಣೆಯಿಂದ ಕರ್ಪ್ಯೂಗೆ ಸಹಕರಿಸಬೇಕು ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!