ವರನಟ ಡಾ.ರಾಜ್ ಕುಮಾರ್ ರನ್ನು ವೀರಪ್ಪನ್ ಅಪಹರಣ ಮಾಡಿದಾಗ ಬಿಡುಗಡೆಗೆ ಶ್ರಮಿಸಿದ್ದ ಸಿದ್ಧಾರ್ಥ

ಬೆಂಗಳೂರು: ವರ ನಟ ಡಾ. ರಾಜ್‍ಕುಮಾರ್ ಅವರು 19 ವರ್ಷಗಳ ಹಿಂದೆ ಗಾಜನೂರಿನಿಂದ ಅಪಹರಣಕ್ಕೀಡಾಗಿದ್ದ ಸಂದರ್ಭದಲ್ಲಿ ಕಾಡುಗಳ್ಳ ವೀರಪ್ಪನ್‍ನಿಂದ ಬಿಡುಗಡೆ ಮಾಡಿದ್ದರ ಹಿಂದೆ ಸಿದ್ಧಾರ್ಥ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.
ಅಪಹರಣದ ಬಳಿಕ ರಾಜಣ್ಣನ ಕುಟುಂಬಸ್ಥರೊಂದಿಗೆ ಸಭೆ ನಡೆಸಿದ ಸಿದ್ಧಾರ್ಥ್ ಅವರು, ತಮಿಳುನಾಡು ಸರ್ಕಾರದ ಸಹಾಯ ಪಡೆದಿದ್ದರು. ಸಿಎಂ ಆಗಿದ್ದ ಎಸ್‍ಎಂ ಕೃಷ್ಣ ಅವರು ಆದಿಕೇಶವಲು ಜೊತೆ ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು.
ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಳಸಿಕೊಂಡು ರಾಜ್ ಬಿಡುಗಡೆಗೆ ಪ್ರಯತ್ನಗಳು ಸಿದ್ದಾರ್ಥ್ ನೇತೃತ್ವದಲ್ಲಿ ನಡೆದಿದ್ದವು. ಬಳಿಕ ವೀರಪ್ಪನ್ ಸಂಪರ್ಕದಲ್ಲಿದ್ದ ತಮಿಳುನಾಡಿನ ಧನು, ನೆಡುಮಾರನ್ ಹಾಗೂ ಕೊಳತ್ತೂರು ಮಣಿಯನ್ನು ಸಂಪರ್ಕಿಸಿ ಕೊನೆಗೂ ರಾಜ್‍ಕುಮಾರ್ ಅವರನ್ನು ಬಿಡುಗಡೆ ಮಾಡಲಾಯ್ತು.
ಇದೆಲ್ಲ ಪರಿಶ್ರಮದ ಹಿಂದೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಇದ್ದರು. ಇಂದು ಅದೇ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ರಾತ್ರಿಯಿಂದ ಸಿದ್ಧಾರ್ಥ್ ಕಾಣೆಯಾಗಿದ್ದರು. ಆ ಬಳಿಕ ಅವರ ಪತ್ತೆಗಾಗಿ ಸಾಕಷ್ಟು ಕುಡುಕಾಟ ನಡೆಸಲಾಗಿತ್ತು.
ಆದರೆ ಇಂದು ಬೆಳಗ್ಗೆ ಸಿದ್ಧಾರ್ಥ್ ಮೃತದೇಹ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ದೊರಕಿದೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ನದಿಯಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಅನುಮಾನದಿಂದ ದೋಣಿ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!