ಸಿದ್ದಾರ್ಥ್ ಕೊನೆಯ ಮೊಬೈಲ್ ಲೊಕೇಷನ್ ಪತ್ತೆ: “ಆಪರೇಷನ್ ಸಿದ್ಧಾರ್ಥ್”ಹೆಸರಲ್ಲಿ ಶೋಧ

ಮಂಗಳೂರು : ಸೋಮವಾರ ಸಂಜೆ ನೇತ್ರಾವತಿ ನದಿಗೆ ಜಪ್ಪಿನಮೊಗರು ಎಂಬಲ್ಲಿ ನಿರ್ಮಿಸಿರುವ ಸೇತುವೆ ಬಳಿಯಿಂದ ಸಿದ್ಧಾರ್ಥ್ ನಾಪತ್ತೆಯಾದ ಹಿನ್ನೆಲೆಯಲ್ಲಿ `ಆಪರೇಷನ್ ಸಿದ್ಧಾರ್ಥ್’ ಹೆಸರಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆಗಳ ಸುಮಾರು 200 ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದಾರೆ.
ಕೆಫೆ ಕಾಫಿ ಡೇ ಮಾಲೀಕ ಸಿದ್ಧರ್ಥ್ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಸಿದ್ಧಾರ್ಥ್ ಅವರ ಮೊಬೈಲ್‍ನ ಕೊನೆಯ ಲೊಕೇಷನ್ ಸಹ ಸೇತುವೆ ಮಧ್ಯದಲ್ಲಿ ತೋರಿಸುತ್ತಿರವ ವಿಚಾರ ಬೆಳಕಿಗೆ ಬಂದಿದೆ.
ಈಗಾಗಲೇ ಈ ಪ್ರಕರಣ ಸಂಬಂಧ ಪೊಲೀಸರು ಪ್ರಾಥಮಿಕ ತನಿಖೆಯನ್ನು ಅಂತ್ಯಗೊಳಿಸಿದ್ದಾರೆ. ಮುಂಜಾನೆಯಿಂದ ಸಿದ್ದಾರ್ಥ್ ಅವರ ಕಾರು ಚಾಲಕ ಬಸವರಾಜ್ ಅವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಸಿದ್ಧಾರ್ಥ್ ಮೊಬೈಲ್ ಲೋಕೇಷನ್ ಪರಿಶೀಲಿಸಿದಾಗ ಸೇತುವೆಯ ಮಧ್ಯಭಾಗದಲ್ಲಿ ಅವರ ಕೊನೆಯ ಮೊಬೈಲ್ ಲೋಕೇಷನ್ ಪತ್ತೆಯಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬೆಳಗ್ಗೆ ತನಿಖೆ ನಡೆಸಲು ಆಗಮಿಸಿದ್ದ ಶ್ವಾನ ದಳದ ನಾಯಿ ಸಹ ಸೇತುವೆ ಮಧ್ಯಭಾಗದವರೆಗೆ ಬಂದಿತ್ತು. ಪೊಲೀಸ್ ವಿಚಾರಣೆ ವೇಳೆ ಡ್ರೈವರ್, ಸೋಮವಾರ ಸಂಜೆ ಹೊತ್ತಿನಲ್ಲಿ ಸೇತುವೆಯ ಬಳಿ ಕಾರನ್ನು ನಿಲ್ಲಿಸು ಎಂದು ಸಿದ್ಧಾರ್ಥ್ ಹೇಳಿದ್ದರು. ಕಾರಿನಿಂದ ಇಳಿದು ಸೇತುವೆಯ ಮೇಲೆ ಸಿದ್ದಾರ್ಥ್ ನಡೆದುಕೊಂಡು ಫೋನಿನಲ್ಲಿ ಮಾತನಾಡುತ್ತಾ ಹೋಗುತ್ತಿದ್ದರು. ಕೆಲ ನಿಮಿಷ ಕಳೆದರೂ ಅವರು ಬಾರದೇ ಇದ್ದಾಗ ಕರೆ ಮಾಡಿದ್ದೆ. ಈ ವೇಳೆ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ತಿಳಿಸಿದ್ದರು.
ಡ್ರೈವರ್ ಹೇಳಿದ್ದೇನು?
ನಾನು ಕಳೆದು ಮೂರು ವರ್ಷಗಳಿಂದ ಕಾಫಿ ಡೇ ಮಾಲೀಕರಾದ ಸಿದ್ಧಾರ್ಥ್ ಅವರು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಸೋಮವಾರ ಎಂದಿನಂತೆ ಸದಾಶಿವನಗರದಲ್ಲಿರುವ ಸಿದ್ಧಾರ್ಥ್ ಅವರ ಮನೆಗೆ ಕೆಲಸಕ್ಕೆ ಹೋಗಿದ್ದೆ. ನಂತರ ಸುಮಾರು 8 ಗಂಟೆಗೆ ಸಿದ್ಧಾರ್ಥ್ ಅವರು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಅವರ ಕಚೇರಿಗೆ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋದೆ. ನಂತರ ಕಚೇರಿಯಲ್ಲಿದ್ದು, ಬೆಳಗ್ಗೆ 11 ಗಂಟೆ ವಾಪಸ್ ಮನೆಗೆ ಬಂದೆವು ಎಂದು ತಿಳಿಸಿದ್ದಾರೆ.
ಮನೆಗೆ ಬಂದ ನಂತರ ಸಿದ್ಧಾರ್ಥ್ ಅವರು ಊರಿಗೆ ಹೋಗಬೇಕಾಗಿದೆ ನೀನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ ಎಂದು ಹೇಳಿದರು. ನಾನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಂದೆ. ಬಳಿಕ ಸುಮಾರು 5.30ಕ್ಕೆ ಸಕಲೇಶಪುರದ ಕಡೆಗೆ ಹೋಗು ಎಂದರು. ನಾನು ಅವರು ಹೇಳಿದಂತೆ ಕೆಎ 03 ಎನ್‍ಸಿ, 2592 ಕಾರಿನಲ್ಲಿ ಬೆಂಗಳೂರನ್ನು ಬಿಟ್ಟು ಸಕಲೇಶಪುರದ ಕಡೆ ಚಲಾಯಿಸಿಕೊಂಡು ಹೋದೆ. ಸಕಲೇಶಪುರ ಸಮೀಪಿಸುತ್ತಿದಂತೆ ಮುಂದೆ ಮಂಗಳೂರು ಕಡೆ ಹೋಗುವಾ ಎಂದು ತಿಳಿಸಿದರು. ನಾನು ಅವರು ತಿಳಿಸಿದಂತೆ ಅವರನ್ನು ಕರೆದುಕೊಂಡು ಮಂಗಳೂರು ನಗರಕ್ಕೆ ಪ್ರವೇಶಿಸುವ ಸರ್ಕಲ್‍ ಪಂಪುವೆಲ್  ಬಳಿ ಬಂದಾಗ ಸಿದ್ಧಾರ್ಥ್ ಎಡಗಡೆ ತೆಗೆದುಕೋ ಸೈಟ್‍ಗೆ ಹೋಗಬೇಕು ಎಂದು ಹೇಳಿದರು.
ಸಿದ್ಧಾರ್ಥ್ ಹೇಳಿದಂತೆ ನಾನು ಎಡಗಡೆಗೆ ತೆಗೆದುಕೊಂಡು ಕೇರಳ ಹೆದ್ದಾರಿಯಲ್ಲಿ 3-4 ಕಿ.ಮೀ ಬಂದಾಗ ನದಿಗೆ ಅಡ್ಡಲಾಗಿ ಕಟ್ಟಿರುವ ಒಂದು ದೊಡ್ಡ ಸೇತುವೆ ಆರಂಭವಾಗುತ್ತಿದ್ದಂತೆ ಕಾರು ನಿಲ್ಲಿಸು ಎಂದು ಹೇಳಿದರು. ನಂತರ ಅವರು ಕಾರಿನಿಂದ ಇಳಿದು ವಾಕಿಂಗ್ ಹೋದರು. ಹೀಗೆ ಇಳಿದು ಫೋನಿನಲ್ಲಿ ಮಾತನಾಡಿಕೊಂಡು ಸ್ವಲ್ಪ ದೂರ ಹೋದವರೇ ಮತ್ತೆ ವಾಪಸ್ ಕಾರು ಬಳಿ ಬಂದರು. ನಂತರ ಪುನಃ ಫೋನಿನಲ್ಲಿ ಮಾತನಾಡಿಕೊಂಡು ಒಂದಷ್ಟು ದೂರ ಹೋದರು. ಹೀಗೆ ಹೋಗುವಾಗ ಅವರನ್ನು ನಾನು ನೋಡುತ್ತಿದ್ದೆ. ಅವರು ಕಾಣಿಸದೇ ಇದ್ದಾಗ ನಾನು ಅವರನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಹೋದೆ.
ನಾನು ಬರುತ್ತಿರುವುದನ್ನು ನೋಡಿ ಅವರು `ನೀನು ಇಲ್ಲೇ ಇರು ಬರಬೇಡ’ ಎಂದು ಹೇಳಿ ಹೋದರು. ಸುಮಾರು ಅರ್ಧ ಗಂಟೆಯಾದರೂ ಅವರು ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ನಾನು ಅವರಿಗೆ ಫೋನ್ ಮಾಡಿದೆ. ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ನಾನು ಮತ್ತಷ್ಟು ಆತಂಕಗೊಂಡಿದ್ದು, ನಾನು ಎಸ್.ಎಂ ಕೃಷ್ಣ ಅವರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ತಿಳಿಸಿದೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!