“ಹಿರಿಯ ತುಳು ಸಾಹಿತಿ ಪೆಜತ್ತಾಯರು ಅಸ್ತಂಗತ”

ಉಡುಪಿ: ಪ್ರಸಿದ್ದ  ಸಾಹಿತಿ,ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ,ಹಾಗೂ ತುಳುಭಾಷೆಯಲ್ಲಿ 15 ಕ್ಕೂ ಮಿಕ್ಕಿ ಅಪೂರ್ವ ಕೃತಿಗಳನ್ನು ರಚಿಸಿರುವ ಶ್ರೀನಿವಾಸ ದೇವೇಂದ್ರ ಪೆಜತ್ತಾಯರು ದಿನಾಂಕ ೨೮ರಂದು ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
21 ರ ಹರೆಯದಲ್ಲೇ ಪಲಿಮಾರು ಗ್ರಾಮದ ಅಧ್ಯಕ್ಷರಾಗಿ ಊರ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪೆಜತ್ತಾಯರು
1960 ದಿಂದ 70 ರ ದಶಕದವರೆಗೆ ಪಲಿಮಾರು ಮಠದ ದಿವಾನರಾಗಿ ಸೇವೆಸಲ್ಲಿಸಿದ್ದರು.
ಮುಂದೆ ಮಣಿಪಾಲದ ಶಿಲ್ಪಿ ಮಾದವ ಪೈ ಹಾಗೂ ಶ್ರಿ ಟಿ ಎ ಪೈಯವರಿಗೆ ಆಪ್ತರೆನಿಸಿದ್ದ ಮಾನ್ಯರು ಅವರ ಜೊತೆ ಎರಡು ದಶಕಗಳ ಕಾಲ ವಿವಿಧ ರಂಗಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.
ಬ್ಯಾಂಕಿನಲ್ಲಿ ನಿವೃತ್ತಿ ಪಡೆದ ನಂತರ ಕನ್ನಡ ಹಾಗೂ ತುಳುಭಾಷೆಯಲ್ಲಿ ಅನೇಕ  ಕೃತಿಗಳನ್ನು ರಚಿಸಿದ ಶ್ರಿ ಪೆಜತ್ತಾಯರಿಗೆ ನಾಡಿನ ಪ್ರಸಿದ್ದ ಸಂಘಟನೆಗಳಿಂದ ಪ್ರಶಸ್ತಿಗಳ ಸರಮಾಲೆಗಳೇ ಒಲಿದಿತ್ತು.
15 ನೇ ಶತಮಾನದಲ್ಲಿ ಶ್ರಿ ವಾದಿರಾಜರು ರಚಿಸಿದ ಶ್ರೀಲಕ್ಷ್ಮೀ ಶೋಭಾನೆ ಹಾಡನ್ನು ಮೊತ್ತ ಮೊದಲ ಭಾರಿಗೆ ತುಳು ಭಾಷೆಗೆ ಭಾಷಾಂತರ ಮಾಡುವ ಮೂಲಕ ಅನೇಕ ಸಾಹಿತಿಗಳ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದರು. ಸಂಗ್ರಹ ರಾಮಾಯಣ ಮತ್ತು ಮಹಾಭಾರತದ ಭಾವಾನುವಾದ ತುಳುಸಾಹಿತ್ಯಕ್ಕೆ ಶ್ರೀಯುತರ ಅಮೂಲ್ಯ ಕೊಡುಗೆ.ಭಕ್ತ ಕನಕದಾಸರ   ಕನಕೋಪನಿಷತ್ತಿನ ಭಾಷಾಂತರ ಮಾನ್ಯರ ಇನ್ನೊಂದು ವಿಶೇಷ ಸಾಧನೆ.
ಕನ್ನಡ ಸಾಹಿತ್ಯದಲ್ಲೂ ಕೂಡಾ ವೈವಿಧ್ಯಮಯವಾದ ಕಥೆ,ಕವನ,ಕೀರ್ತನೆಗಳನ್ನು  ರಚಿಸಿದ್ದಾರೆ.ಶ್ರೀಯುತರ ಕನ್ನಡ ಹಾಗೂ ತುಳು ಸಾಹಿತ್ಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಪರಿಷತ್ ಇವರ ಅನೇಕ ಕೃತಿಗಳನ್ನು ಪ್ರಕಟಸಿ ಗೌರವಿಸಿತ್ತು.
 ಉಡುಪಿ ಕೃಷ್ಣಮಠ,ಅಷ್ಟಮಠ ಹಾಗೂ ನಾಡಿನ ಅನೇಕ ಧಾರ್ಮಿಕ, ಸಾಂಸ್ಕೃತಿಕ ಸಂಘಟನೆಗಳ ಅಭ್ಯುದಯಕ್ಕಾಗಿ ಬಹುವಿಧದ ಕೊಡುಗೆಗಳನ್ನು ನೀಡಿದ್ದಾರೆ.
88 ರ ಹರೆಯದ ಮಾನ್ಯರು ಪತ್ನಿ ರತ್ನಮ್ಮ,ಪುತ್ರ ವಾದಿರಾಜ್,ಮೂವರು ಪುತ್ರಿಯರು ವೀಣಾ       ಶರತ್,ವಿದ್ಯಾ ಸುರೇಶ್, ವಿವೇಕ ರಾಮಗೋಪಾಲ್ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!