ಮೀನುಗಾರರಿಗೆ ಸರಕು ಸಾಗಾಟ ವಾಹನದಲ್ಲಿ ಸಂಚರಿಸಲು ಅವಕಾಶ ಕೋರಿ; ಎಸ್ಪಿಗೆ ಮನವಿ

ಉಡುಪಿ: ಕೇಂದ್ರದ ಸರಕಾರದ ಹೊಸ ಮೋಟಾರು ವಾಹನ ಕಾಯ್ದೆ ಅನ್ವಯ ಮೀನುಗಾರರಿಗೆ ಆಗುವ ತೊಂದರೆ ಬಗ್ಗೆ ಮೀನುಗಾರರ ನಿಯೋಗದಿಂದ ಉಡುಪಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು.

ಕರಾವಳಿ ಕರ್ನಾಟಕದ ಮೀನುಗಾರರಿಗೆ ಸರಕು ಸಾಗಾಟದ ವಾಹನದಲ್ಲಿ ಸಂಚರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ನೇತೃತ್ವದ ನಿಯೋಗ ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಳೆಗಾಲದ ಸಮಯದಲ್ಲಿ ನಾಡದೋಣಿಗಳಲ್ಲಿ ದುಡಿಯುವ ಮೀನುಗಾರರು ಮೀನುಗಾರಿಕಾ ಬಲೆ ಮತ್ತು ಇನ್ನಿತರ ಪರಿಕರಗಳೊಂದಿಗೆ ಮಲ್ಪೆ ಸಹಿತ ಇತರ ಬಂದರುಗಳಿಗೆ ಸರಕು ಸಾಗಾಟದ ಟೆಂಪೋದಲ್ಲಿ ತೆರಳುವಾಗ ಮತ್ತು ಮಹಿಳೆಯರು ಮೀನು ಮಾರಾಟಕ್ಕೆ ಸಣ್ಣ ಗೂಡ್ಸ್ ವಾಹನದಲ್ಲಿ ಸಂಚರಿಸುವಾಗ ಪೊಲೀಸರು ವಾಹನ ಅಡ್ಡಗಟ್ಟಿ ಪ್ರಕರಣ ದಾಖಲಿಸುತ್ತಿದ್ದಾರೆ.

ಮೀನುಗಾರಿಕಾಕ್ಕೆ ಮುಂಜಾನೆ ೩ ಗಂಟೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಅವರು ಗೂಡ್ಸ್ ವಾಹನಗಳನ್ನೇ ಅವಲಂಬಿಸುತ್ತಾರೆ. ಅಲ್ಲದೆ, ಮೀನುಗಾರ ಮಹಿಳೆಯರಿಗೆ ತಮ್ಮ ಮೀನಿನ ಬುಟ್ಟಿಯೊಂದಿಗೆ ಸಂಚರಿಸಲು ಬಹುತೇಕ ಬಸ್‌ಗಳಲ್ಲಿ ಅವಕಾಶ ನೀಡುವುದಿಲ್ಲದಿರುವುದರಿಂದ ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಈ ಮೀನುಗಾರರಿಗೆ ಸರಕು ಸಾಗಾಟ ವಾಹನದಲ್ಲಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಸಮಿತಿಯ ಸದಸ್ಯರಾದ ಲೀಲಾಧರ ಪಡುಬಿದ್ರಿ, ವಿನಯ ಕರ್ಕೇರ, ರವೀಂದ್ರ ಶ್ರಿಯಾನ್, ದಾಸ ಕೋಟ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!