ಯುವ ಸಮುದಾಯದ ಸಂಜೀವಿನಿ ರೋಟರ್‍ಯಾಕ್ಟ್ – ರಾಯನ್ ಫೆರ್ನಾಂಡಿಸ್

ಶಿರ್ವ:-ಸಂದರವಾದ ಭವಿಷ್ಯವನ್ನು ಅರಳಿಸಬೇಕಾದ ಯುವ ಮನಸ್ಸುಗಳು ಇಂದು ಸರಿಯಾದ ಮಾರ್ಗದರ್ಶನದ ಕೊರತೆಯಿಂದ ವಿಕೃತಗೊಂಡು, ವಯಸ್ಸಿಗೂ ಮೀರಿದ ಕಾನೂನು ಬಾಹಿರ ಚಟುವಟಿಕೆಗಳತ್ತ ಆಕರ್ಷಿಸಿ, ಮಾದಕದ್ರವ್ಯ, ಸೆಕ್ಸ್, ಭಯೋತ್ಪಾದನೆ, ದೇಶದ್ರೋಹ, ಸಮಾಜಕಂಟಕ ಕಾರ್ಯಗಳತ್ತ ಸಕ್ರೀಯವಾಗುತ್ತಿರುವುದು ದುರಂತವಾಗಿದೆ. ಅಂತಹ ಮನಸ್ಸುಗಳನ್ನು ಧನಾತ್ಮಕವಾಗಿ ಪರಿವರ್ತಿಸಿ, ಮಾನವೀಯತೆ, ಸರ್ವಸಮಾನತ್ವ,ವಿಶ್ವಭ್ರಾತೃತ್ವ, ಸಮಾಜಮುಖಿ ಚಿಂತನೆಗಳ ಮೂಲಕ ಸಮರ್ಥ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ರೋಟರ್‍ಯಾಕ್ಟ್ ಸಕ್ರೀಯವಾಗಿದೆ. ಯುವ ಸಮುದಾಯದ ಸಂಜೀವಿನಿ ರೋಟರ್‍ಯಾಕ್ಟ್ ಎಂದು ಸಾಮಾಜಿಕ ಕಾರ್ಯಕರ್ತ, ಸುಭಾಸ್‌ನಗರ ರೋಟರ್‍ಯಾಕ್ಟ್ ಅಧ್ಯಕ್ಷ ರಾಯನ್ ಫೆರ್ನಾಂಡಿಸ್ ನುಡಿದರು.

ಅವರು ಶುಕ್ರವಾರ ಕೋಡುಗುಡ್ಡೆ ರೊನಾಲ್ಡ್ ಡಿಸೋಜರವರ ನಿವಾಸದಲ್ಲಿ ಜರುಗಿದ ರೋಟರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪಿಯುಸಿ,ಪದವಿ ಶಿಕ್ಷಣದ ಜೊತೆಯಲ್ಲಿಯೇ ರೋಟರ್‍ಯಾಕ್ಟ್ ತತ್ವಸಿದ್ದಾಂತಗಳನ್ನು ಯುವ ಸಮುದಾಯದಲ್ಲಿ ಜಾಗೃತಗೊಳಿಸಿದಾಗ ಅಂತರ್ಗತ ಪ್ರತಿಭಾವಿಕಸನದ ಜೊತೆಗೆ ಸಮರ್ಥ ನಾಯಕತ್ವ, ವಿಶಾಲದೃಷ್ಠಿಕೋನ,ಪರಹಿತ ಚಿಂತನೆ,ಸೇವಾದರ್ಶ ಮೌಲ್ಯಗಳು ಜಾಗೃತವಾಗಿ ವೈಯುಕ್ತಿಕ ಬದುಕಿನ ಜೊತೆಗೆ ಆದರ್ಶ ಸಾಮಾಜಿಕ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಪ್ರತೀಯೊಂದು ರೋಟರಿ ಸಂಸ್ಥೆಗಳು ಕನಿಷ್ಟ ಒಂದೊಂದು ರೋಟರ್‍ಯಾಕ್ಟ್ ಸಂಸ್ಥೆಗಳನ್ನು ಪ್ರಾರಂಭಿಸಿ ಸಮಾಜ ಕಟ್ಟುವ ಕಾರ್ಯದಲ್ಲಿ ಕೊಡುಗೆ ನೀಡುವಂತೆ ಕರೆಯಿತ್ತರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸುನಿಲ್ ಕಬ್ರಾಲ್ ವಹಿಸಿ ಸ್ವಾಗತಿಸಿದರು. ಮೆಲ್ವಿನ್ ಡಿಸೋಜ ಪರಿಚಯಿಸಿದರು. ಈ ಸಂದರ್ಭದಲ್ಲಿ ವೈವಾಹಿಕ ಜೀವನದ 30 ಸಂವತ್ಸರಗಳನ್ನು ಪೂರೈಸಿದ ರೊನಾಲ್ಡ್ ಡಿಸೋಜ, ಜೆಸಿಂತಾ ಡಿಸೋಜ ದಂಪತಿಗಳನ್ನು ಅಭಿನಂದಿಸಲಾಯಿತು. ರಘುಪತಿ ಐತಾಳ್‌ರವರಿಗೂ ಶುಭ ಹಾರೈಸಲಾಯಿತು. ರೇಶ್ಮಾ ಡಿಸೋಜ, ರೀಶಲ್ ಮಚಾದೊ ಸಹಕರಿಸಿದರು. ರೋಟರಿ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ಧನ್ಯವಾದವಿತ್ತರು.

Leave a Reply

Your email address will not be published. Required fields are marked *

error: Content is protected !!