ಸರ್ಕಾರದ ನಿರ್ಧಾರ ಮೇಲೆ ರಾಜೀನಾಮೆ ವಾಸಪ್ : ಆನಂದ್‌ ಸಿಂಗ್‌

ಬೆಂಗಳೂರು: ‘ವಿಧಾನ ಸಭಾಧ್ಯಕ್ಷರಿಗೆ ಸೋಮವಾರ ರಾಜೀನಾಮೆ ಕೊಟ್ಟಿದ್ದೇನೆ. ತಾಂತ್ರಿಕ ಕಾರಣದಿಂದ ಮತ್ತೊಮ್ಮೆ ರಾಜೀನಾಮೆ ನೀಡುವಂತೆ ಸಭಾಧ್ಯಕ್ಷರು ಸಲಹೆ ಮಾಡಿದರೆ ಇನ್ನೊಮ್ಮೆ ಭೇಟಿಯಾಗಿ ರಾಜೀನಾಮೆ ನೀಡುತ್ತೇನೆ’ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಹೇಳಿದರು. ರಾಜ್ಯಪಾಲರನ್ನು ಭೇಟಿಯಾದ ಬಲಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಧಾನ ಸಭಾಧ್ಯಕ್ಷರು ರಾಜೀನಾಮೆ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಅದನ್ನು ಸ್ಪಷ್ಟಪಡಿಸುವ ಸಲುವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದೆ. ರಾಜೀನಾಮೆ ನೀಡಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದೇನೆ. ರಾಜೀನಾಮೆಗೆ ಕಾರಣವನ್ನೂ ತಿಳಿಸಿದ್ದೇನೆ’ ಎಂದರು. ‘ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡುವುನ್ನು ವಿರೋಧಿಸಿದ್ದೆ.

ಭೂಮಿ ನೀಡುವುದಾದರೆ ಗುತ್ತಿಗೆ ಆಧಾರದಲ್ಲಿ ನೀಡಲಿ. ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಜಮೀನು ಪರಭಾರೆ ಮಾಡಿದರೆ ಶಾಸಕ ಸ್ಥಾನ ಸೇರಿದಂತೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದೆ. ಆದರೆ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು. ‘ಬಳ್ಳಾರಿಯನ್ನು ವಿಜಯನಗರ ಜಿಲ್ಲೆ ಮಾಡಬೇಕು’ ಎಂದು ಆನಂದ್ ಸಿಂಗ್ ಒತ್ತಾಯಿಸಿದರು. ‘ಈಗ ರಾಜೀನಾಮೆ ನೀಡಿದ್ದೇನೆ. ಸರ್ಕಾರದ ನಿರ್ಧಾರ ಮೇಲೆ ರಾಜೀನಾಮೆ ವಾಸಪ್ ಪಡೆಯಬೇಕೆ, ಬೇಡವೆ ಎಂಬುದು ನಿರ್ಧಾರವಾಗುತ್ತದೆ’ ಎಂದರು.

Leave a Reply

Your email address will not be published. Required fields are marked *

error: Content is protected !!