ವಿಶ್ವಾಸ ಮತಯಾಚನೆಗೆ ನಾನು ಸಿದ್ಧ : ಸಿಎಂ

ಬೆಂಗಳೂರು: ರಾಜ್ಯ ರಾಜಕೀಯ ಗೊಂದಲದ ಕಾರಣದಿಂದ ವಿಶ್ವಾಸ ಮತಯಾಚನೆ ನನಗೆ ಅನಿವಾರ್ಯ ಎನಿಸಿದೆ. ನನ್ನ ಅಭಿಪ್ರಾಯ ಹಿನ್ನೆಲೆಯಲ್ಲಿ ವಿಶ್ವಾಸ ಮತಯಾಚನೆ ಮಾಡಲು ನಿರ್ಧರಿಸಿದ್ದೇನೆ ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿ ಹೇಳಿದ್ದಾರೆ.

ಸದನದಲ್ಲಿ ಮಾತನಾಡಿದ ಸಿಎಂ ಅವರು, ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ಹಲವು ಶಾಸಕರ ಕೆಲ ನಿರ್ಣಯಗಳಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಆದ್ದರಿಂದ ನಾನು ವಿಶ್ವಾಸ ಮತಯಾಚನೆ ಮಾಡಲು ತೀರ್ಮಾನಿಸಿದ್ದೇನೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ನಾನು ಎಲ್ಲದಕ್ಕೂ ತಯಾರಾಗಿ ಬಂದಿದ್ದು, ಸದನದ ಮುಖಾಂತರ ಒಂದು ಉತ್ತಮ ನಿರ್ಧಾರ ಮಾಡುವ ಅವಕಾಶ ಕೋರುತ್ತಿದ್ದೇನೆ ಎಂದರು.

ಗಣ್ಯರ ನಿಧನಕ್ಕೆ ಸಂತಾಪ ಸೂಚಿಸುವ ಮುನ್ನ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಕುರಿತು ತಿಳಿಸಿದರು. ವಿಶ್ವಾಸ ಮತಯಾಚನೆಗೆ ಸ್ಪೀಕರ್ ಅವರು ಸಮಯ ನಿಗದಿ ಮಾಡಲಿದ್ದು, ಸಿಎಂ ಮನವಿ ಬಳಿಕ 7 ದಿನಗಳ ವರೆಗೂ ವಿಶ್ವಾಸ ಮತಯಾಚನೆಗೆ ಸಮಯ ನಿಗದಿ ಮಾಡುವ ಅವಕಾಶ ಇದೆ. ಸದ್ಯ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ಇರುವುದರಿಂದ ಸಿಎಂರ ನಡೆ ಕುತೂಹಲ ಮೂಡಿಸಿದೆ.

ಇತ್ತ ಸಿಎಂ ಅವರ ನಿರ್ಧಾರ ಬಿಜೆಪಿ ನಾಯಕರಿಗೆ ಅಚ್ಚರಿ ಮೂಡಿಸಿದ್ದು ಸರ್ಕಾರ ರಕ್ಷಣೆಗೆ ದೋಸ್ತಿ ನಾಯಕರು ಏನು ಪ್ಲಾನ್ ಮಾಡಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಸದ್ಯ ಮಂಗಳವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಸೂಚನೆ ನೀಡಿರುವುದಿರಿಂದ ಮಂಗಳವಾರದ ಬಳಿಕ ಏನೆಲ್ಲಾ ಬೆಳೆವಣಿಗೆಗಳು ನಡೆಯಲಿದೆ ಎಂಬುದು ಕುತೂಹಲ ಮೂಡಿದೆ. ಸಿಎಂ ನಿರ್ಧಾರದ ಬೆನ್ನಲ್ಲೇ ಸದನದಿಂದ ತಮ್ಮ ಕೊಠಡಿಗೆ ತೆರಳಿದ ಬಿಎಸ್‍ವೈ ಅವರು ಕೆಲ ಶಾಸಕರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.

Leave a Reply

Your email address will not be published. Required fields are marked *

error: Content is protected !!