ಕೊರೋನಾ ವೈರಸ್ ಗೆ ಪತಂಜಲಿ ಮದ್ದು: ರಾಮ್ ದೇವ್ ವಿರುದ್ಧ ವೈದ್ಯರ ಆಕ್ರೋಶ

ನವದೆಹಲಿ:  ಕೊರೋನಾ ವೈರಸ್ ಗೆ ಪತಂಜಲಿ ಬಳಿ ಔಷಧಿ ಇದೆ ಎಂದು ಹೇಳುವ ಮೂಲಕ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ವೈದ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಳೆದ ಹಲವು ತಿಂಗಳಿಂದ ಜಗತ್ತಿನ ಸುಮಾರು 40ಕ್ಕೂ ಅಧಿಕ ರಾಷ್ಟ್ರಗಳಿಗೆ ಕೊರೋನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಸೂಕ್ತ ಔಷಧಿಗಾಗಿ ವೈದ್ಯರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರು ಕೊರೋನಾ ರೋಗಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿದ್ದಾರೆ. 

ತಮ್ಮ ಪತಂಜಲಿ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹಿರಾತಿನಲ್ಲಿ ಮಾತನಾಡಿರುವ ಬಾಬಾ ರಾಮ್ ದೇವ್ ಅವರು, ಕೊರೋನಾ ವೈರಸ್ ಸೇರಿದಂತೆ ವಿವಿಧ ಮಾರಣಾಂತಿಕ ವೈರಸ್ ಗಳಿಗೆ ಆಯುರ್ವೇದದಲ್ಲಿ ಔಷಧಿಯಿದೆ. ವೈಜ್ಞಾನಿಕವಾಗಿ ಸಂಶೋಧನೆಯನ್ನೂ ಮಾಡಿದ್ದೇವೆ. ಕೊರೋನಾ ರೋಗಕ್ಕೆ ಅಶ್ವಗಂಧ ಮದ್ದೆಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ. ಮಾನವನ ಪ್ರೋಟೀನ್ ಜೊತೆ ಕೊರೋನಾ ವೈರಸ್​ನ ಪ್ರೋಟೀನ್ ಸಮ್ಮಿಳಿತಗೊಳ್ಳದಂತೆ ಅಶ್ವಗಂಧ ಕೆಲಸ ಮಾಡುತ್ತದೆ ಎಂದು ಹೇಳಿದ್ದರು. 

ಅವರ ಈ ಹೇಳಿಕೆಗೆ ಇದೀಗ ವೈದ್ಯ ಲೋಕ ಅಸಮಾಧಾನ ವ್ಯಕ್ಕಪಡಿಸಿದ್ದು, ‘ಇಂಥಹ ಹೇಳಿಕೆಗಳು ಜನರಲ್ಲಿ ನಕಲಿ ಭದ್ರತಾ ಭಾವನೆ ಸೃಷ್ಟಿಸುತ್ತದೆ. ಹೆಚ್ಚು ಶಿಕ್ಷಿತರಲ್ಲದ ಜನರು ಇಂಥ ಜಾಹೀರಾತಿಗೆ ಮರುಳಾಗುತ್ತಾರೆ. ಇಂಥ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಕೆಲ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇದೇ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಆಯುಶ್ ಇಲಾಖೆಯ ಸಲಹೆಗಾರ ಮನೋಜ್ ನೇಸರಿ ಅವರು, ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ, ಕೊರೋನಾ ವೈರಸ್ ನಿಗ್ರಹ ಸಾಧ್ಯವೆಂಬುದು ತಮಗೆ ಗೊತ್ತಿಲ್ಲ. ಈ ಬಗ್ಗೆ ದೂರು ಕೊಟ್ಟರೆ ಪರಿಶೀಲಿಸಲಾಗುವುದು ಎಂದಿದ್ದಾರೆ.

1 thought on “ಕೊರೋನಾ ವೈರಸ್ ಗೆ ಪತಂಜಲಿ ಮದ್ದು: ರಾಮ್ ದೇವ್ ವಿರುದ್ಧ ವೈದ್ಯರ ಆಕ್ರೋಶ

  1. Why not if it prevents Corona by building up immunity ?
    Do Indian doctors condemn only because teertha has not
    emerged from videshi shankha ?

Leave a Reply

Your email address will not be published. Required fields are marked *

error: Content is protected !!