ಬ್ಯಾಂಕ್‌ ಮರುಸಾಲ ಪಾವತಿಗೆ ಒತ್ತಾಯಿಸದಂತೆ ತಾಕೀತು: ಕೋಟ

ಉಡುಪಿ: ಪ್ರಸ್ತಾಪಿತ ಸಾಲಮನ್ನಾ ಯೋಜನೆ ಆರ್ಥಿಕ ಇಲಾಖೆಯಲ್ಲಿ ಬಾಕಿಯಿದ್ದು, ಅದರ ಹಣ ಪಾವತಿ ಆಗುವವರೆಗೆ ಯೋಜನೆಯ ಫಲಾನುಭವಿಗಳಿಗೆ ಸಾಲದ ಹಣ ಮರುಪಾವತಿಸುವಂತೆ ಒತ್ತಾಯ ಹೇರಬಾರದೆಂದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ತಾಕೀತು ಮಾಡಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಒಟ್ಟು 23 ಸಾವಿರ ಮಹಿಳಾ ಮೀನುಗಾರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿದ್ದ ತಲಾ 50 ಸಾವಿರದಂತೆ ಒಟ್ಟು 62 ಕೋಟಿ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಿತ್ತು. ಆದರೆ ಈ ಯೋಜನೆಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲು ಬಾಕಿಯಿದ್ದು, ಇನ್ನೂ ಅನುಷ್ಠಾನಗೊಂಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸಾಲ ಮನ್ನಾದ ಘೋಷಣೆ ಮಾಡಿದ್ದರೂ ಅದರ ಲಾಭ ನಮಗೆ ಸಿಗುತ್ತಿಲ್ಲ. ಬ್ಯಾಂಕ್‌ಗಳು ಸಾಲ ಮರುಪಾವತಿಸುವಂತೆ ಒತ್ತಾಯ ಹೇರುತ್ತಿವೆ ಎಂದು ಮಹಿಳಾ ಮೀನುಗಾರರು ಮನವಿ ಮಾಡಿಕೊಂಡಿದ್ದರು ಎಂದರು.


ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ, ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷರು,
ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಲೀಡ್‌ ಬ್ಯಾಂಕ್‌ ಅಧಿಕಾರಿಗಳು ಹಾಗೂ ಆಯ್ದ ಕೆಲ ಸೊಸೈಟಿಗಳ ಜತೆ ಸಭೆ ಕರೆದು ಯಾವುದೇ ಕಾರಣಕ್ಕೂ ಮಹಿಳಾ ಮೀನುಗಾರರಿಂದ ಸಾಲ ಮರುಪಾವತಿಗೆ ಒತ್ತಾಯ ಮಾಡದಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.  

Leave a Reply

Your email address will not be published. Required fields are marked *

error: Content is protected !!