ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 3.69 ಕೋಟಿ ಲಾಭ : ಯಶ್‌ಪಾಲ್ ಎ. ಸುವರ್ಣ

ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2018-19ನೇ ಸಾಲಿನಲ್ಲಿ 1,070.76 ಕೋಟಿ ವ್ಯವಹಾರ ನಡೆಸಿ, 3.69 ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕಿನ ಮಾನ್ಯತೆಯೊಂದಿಗೆ ಪರಿವೀಕ್ಷಣೆಗೆ ಒಳಪಟ್ಟಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ 2018-19 ನೇ ಸಾಲಿನಲ್ಲಿ 120.04 ಕೋಟಿ ಠೇವಣಿ ಸಂಗ್ರಹ ಹಾಗೂ 89.32 ಕೋಟಿ ಸಾಲ ಮತ್ತು ಮುಂಗಡದೊಂದಿಗೆ, ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲದ ಪ್ರಮಾಣವು ಶೂನ್ಯವಾಗಿದ್ದು, ಠೇವಣಿ ಸಂಗ್ರಹಣೆಯಲ್ಲಿ 15.78%, ಸಾಲ ಮತ್ತು ಮುಂಗಡ 21.29%, ಪಾಲು ಬಂಡವಾಳ 12.42% ಪ್ರಗತಿ ಸಾಧಿಸಿದ್ದು, ಸಿ. ಆರ್. ಎ. ಆರ್. ಪ್ರಮಾಣ 14.19% ಹೊಂದಿದೆ.
ಕಳೆದ ೯ ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ 18% ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ.

ಬ್ಯಾಂಕಿನ ಪ್ರಸ್ತುತ ಠೇವಣಿ 130 ಕೋಟಿ ಹಾಗೂ ಸಾಲ ಮತ್ತು ಮುಂಗಡ 105 ಕೋಟಿಯೊಂದಿಗೆ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ದಾಖಲಿಸುತ್ತಿದೆ.
ಬ್ಯಾಂಕಿನ ಮಲ್ಪೆ, ಕುಂದಾಪುರ, ಮಂಗಳೂರು, ಸುರತ್ಕಲ್ ಶಾಖೆ ಹಾಗೂ ಆಡಳಿತ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಆರ್.ಟಿ.ಜಿ.ಎಸ್., ನೆಫ್ಟ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಸೇಫ್ ಡೆಪಾಸಿಟ್ ಲಾಕರ್, ಈ ಸ್ಟ್ಯಾಂಪಿಂಗ್, ಎಸ್‌ಎಮ್‌ಎಸ್ ಬ್ಯಾಂಕಿಂಗ್ ಸೇವೆಗಳನ್ನು ಅಳವಡಿಸಿದೆ. ಎಬಿಕ್ಸ್ ಕ್ಯಾಶ್ (ವೆಸ್ಟರ್ನ್ ಯೂನಿಯನ್) ಎಟಿಎಂ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಈಗಾಗಲೇ ಚಾಲನೆ ನೀಡಿದ್ದು ಶೀಘ್ರದಲ್ಲಿಯೇ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.

ಮಲ್ಪೆ ಶಾಖೆಯ ಗ್ರಾಹಕರ ಹೆಚ್ಚಿನ ಸೇವೆಗಾಗಿ ವ್ಯವಹಾರ ಸಮಯವನ್ನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ವಿಸ್ತರಿಸಲಾಗಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದ್ದಾರೆ.

ಕರಾವಳಿಯ 3 ಜಿಲ್ಲೆಯ ಎಲ್ಲಾ ಮಹಿಳಾ ಮೀನುಗಾರರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ಬ್ಯಾಂಕ್ ಕಾರ್ಯಪ್ರವೃತ್ತವಾಗಿದ್ದು, ಈಗಾಗಾಲೇ ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳನ್ನು ರಚಿಸಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಿದ್ದು ಸರಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಪ್ರತಿವರ್ಷ ಬ್ಯಾಂಕಿನ ಅರ್ಹ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಾ ಕರಾವಳಿ ಭಾಗದ ಎಲ್ಲಾ ವರ್ಗದ ಜನರಿಗೆ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ನೀಡುವ ದೃಷ್ಟಿಕೋನ ಹೊಂದಿದೆ.

1978ರಲ್ಲಿ ಆರಂಭಗೊಂಡಿರುವ ಬ್ಯಾಂಕ್ 41 ವರ್ಷಗಳನ್ನು ಪೂರೈಸಿದ್ದು, 50 ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ 1 ಲಕ್ಷ ಸದಸ್ಯರನ್ನೊಳಗೊಂಡು, 1 ಸಾವಿರ ಕೋಟಿ ಠೇವಣಿ ಹಾಗೂ 10 ಸಾವಿರ ಕೋಟಿ ವಾರ್ಷಿಕ ವ್ಯವಹಾರದ ಗುರಿಯೊಂದಿಗೆ ಮುಂಬರುವ ದಿನಗಳಲ್ಲಿ ಉತ್ತರ ಕನ್ನಡ ಹಾಗೂ ರಾಜಧಾನಿ ಬೆಂಗಳೂರಿನಲ್ಲಿಯೂ ಶಾಖೆಗಳನ್ನು ಆರಂಭಿಸಿ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವ ಯೋಜನೆ ಆಡಳಿತ ಮಂಡಳಿಯ ಮುಂದಿದೆ.

ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!