ಸತತ 10ನೇ ವರ್ಷ ಶೇ.18 ಡಿವಿಡೆಂಡ್ ಘೋಷಿಸಿದ ಮಹಾಲಕ್ಷ್ಮೀ ಬ್ಯಾಂಕ್

ಮಹಾಲಕ್ಷ್ಮೀ ಕೋ-ಓಪರೇಟಿವ್ ಬ್ಯಾಂಕ್ ನಿ., ಉಡುಪಿ ಇದರ 2018-19ರ ಆರ್ಥಿಕ ವರ್ಷದ 41ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣರವರ ಅಧ್ಯಕ್ಷತೆಯಲ್ಲಿ ಆಡಳಿತ ಕಛೇರಿಯ ಸಂಕೀರ್ಣದಲ್ಲಿ ಜರುಗಿತು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣರವರು ಸರ್ವ ಸದಸ್ಯರನ್ನು ಸ್ವಾಗತಿಸಿ, ಬ್ಯಾಂಕು ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯ ಪ್ರಗತಿ ಸಾಧಿಸಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುವುದರೊಂದಿಗೆ ಬ್ಯಾಂಕಿನ ಮುಂದಿನ ಯೋಜನೆ ಹಾಗೂ ಗುರಿಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ದಿನಾಂಕ 14-9-2019ರಂದು ನಡೆಯಲಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವ ನಮ್ಮ ಸುರತ್ಕಲ್ ಶಾಖೆಯ ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ಸದಸ್ಯರನ್ನು ಆತ್ಮೀಯವಾಗಿ ಆಹ್ವಾನಿಸಿದರು.

ವರದಿ ವರ್ಷದಲ್ಲಿ ಆದಾಯ ತೆರಿಗೆಗೆ ಹಾಗೂ ನಿಯಮದಂತೆ ಇತರ ಸಲುವಳಿಗಳಿಗೆ ಅನುವು ಮಾಡುವ ಮೊದಲು ರೂ.3.69 ಕೋಟಿ ಲಾಭ ಗಳಿಸಿದ್ದು, ಆದಾಯ ತೆರಿಗೆಗೆ ಹಾಗೂ ಇತರ ಸಲುವಳಿಗಳಿಗೆ ಅನುವು ಮಾಡಿದ ನಂತರ ರೂ. 151.03 ಲಕ್ಷ ನಿವ್ವಳ ಲಾಭ ಗಳಿಸಿದ್ದು, 2018-19ರ ವರ್ಷಾಂತ್ಯಕ್ಕೆ ಬ್ಯಾಂಕಿನ ಠೇವಣಿಯು ರೂ.120.04 ಕೋಟಿಗೆ ಹಾಗೂ ಸಾಲ ಮತ್ತು ಮುಂಗಡವು ರೂ.89.33 ಕೋಟಿಗೆ ತಲುಪಿದ್ದು ಬ್ಯಾಂಕಿನ ಒಟ್ಟು ವಹಿವಾಟು ರೂ.1070.76 ಕೋಟಿ, ದುಡಿಯುವ ಬಂಡವಾಳವು ರೂ149.08 ಕೋಟಿ ಇರುವುದನ್ನು ಹಾಗೂ ಬ್ಯಾಂಕಿನ ನಿವ್ವಳ ಅನುತ್ಪಾದಕ ಸಾಲದ ಪ್ರಮಾಣವು ಶೂನ್ಯವಾಗಿದ್ದು ಆರ್ಥಿಕ ಗುಣಮಟ್ಟದಲ್ಲಿ ಹಾಗೂ ಸಂಪನ್ಮೂಲ ನಿರ್ವಹಣೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವುದನ್ನು ವಿವರಿಸಲಾಯಿತು.

ಇದನ್ನನುಸರಿಸಿ ಶಾಸನಬದ್ಧ ಲೆಕ್ಕಪರಿಶೋಧಕರು ಬ್ಯಾಂಕನ್ನು ‘ಎ’ ದರ್ಜೆಯಲ್ಲಿ ವರ್ಗೀಕರಿಸಿರುವುದನ್ನು ತಿಳಿಸಲಾಯಿತು ಹಾಗೂ ಸದಸ್ಯರಿಗೆ ಶೇ.18 ಡಿವಿಡೆಂಡ್‌ನ್ನು ಸರ್ವಾನುಮತದಿಂದ ಘೋಷಿಸಿದ್ದು, ಇದರಲ್ಲಿ ಶೇ.3ನ್ನು ಸಮಾಜ ಕಲ್ಯಾಣ ನಿಧಿಗೆ ವಿನಿಯೋಗಿಸುವಂತೆ ಸದಸ್ಯರಿಂದ ಬಂದ ಸಲಹೆಯನ್ನು ಸಭೆಯ ಮುಂದಿರಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.ಹಾಗೂ ಇದೇ ಸಂದರ್ಭದಲ್ಲಿ ಡಾ.ಜಿ ಶಂಕರ್ ಪ್ರಥಮ ದರ್ಜೆ ಕಾಲೇಜಿಗೆ ೨ ಕುಡಿಯುವ ನೀರಿನ ಘಟಕವನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣರವರು ತಮ್ಮ ಸ್ವಂತ ಖರ್ಚಿನಿಂದ ಒದಗಿಸುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ (www.mahalakshmicoopbank.com)ನ್ನು ಹಿರಿಯ ಸದಸ್ಯರು , ಬ್ಯಾಂಕಿನ ಸಕ್ರಿಯ ಗ್ರಾಹಕರು ಆದ ಶ್ರೀ ಎ ಸಿ ಕುಂದರ್‌ರವರು ಉದ್ಘಾಟಿಸಿ, ಬ್ಯಾಂಕು ಪ್ರಗತಿಯತ್ತ ಸಾಗುತ್ತಿರುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳು ಬ್ಯಾಂಕಿನಿಂದ, ಸದಸ್ಯರು, ಗ್ರಾಹಕರು ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ಬ್ಯಾಂಕಿನ ಸದಸ್ಯರ ೬೭ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದವರಿಗೆ ಹಾಗೂ ಮಹಾಸಭೆಯಲ್ಲಿ ವ್ಯಕ್ತವಾದ ಅಭಿವೃದ್ಧಿಪರ ಸಲಹೆ ಸೂಚನೆಗಳಿಗೆ ಕೃತಜ್ಞತೆಯನ್ನು ಸಲ್ಲಿಸಿ, ಮುಂಬರುವ ವರ್ಷಗಳಲ್ಲಿಯೂ ಸಹ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಅಧ್ಯಕ್ಷರು ಕೋರಿದರು. ಬ್ಯಾಂಕಿನ ನಿರಂತರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬ್ಯಾಂಕಿನ ಸಾಧನೆಯ ಬಗ್ಗೆ ಸದಸ್ಯರು ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಪಿ ಮಾಧವ ಸುವರ್ಣ, ನಿರ್ದೇಶಕರಾದ ಶ್ರೀ ವೆಂಕಟರಮಣ ಕಿದಿಯೂರು, ವಾಸುದೇವ ಸಾಲ್ಯಾನ್, ಶಶಿಕಾಂತ ಬಿ ಕೋಟ್ಯಾನ್, ಹೇಮನಾಥ ಜೆ ಪುತ್ರನ್, ಶೋಭೇಂದ್ರ ಸಸಿಹಿತ್ಲು, ಕೆ ಸಂಜೀವ ಶ್ರೀಯಾನ್, ರಾಮ ನಾಯ್ಕ್ ಎಚ್, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರ, ಬಿ ಬಿ ಕಾಂಚನ್, ಶಿವರಾಮ ಕುಂದರ್, ಶ್ರೀಮತಿ ವನಜಾ ಹೆಚ್ ಕಿದಿಯೂರು, ಶ್ರೀಮತಿ ವನಜಾ ಜೆ ಪುತ್ರನ್, ವೃತ್ತಿಪರ ನಿರ್ದೇಶಕರಾದ ಶ್ರೀ ಮಂಜುನಾಥ ಎಸ್ ಕೆ, ರಾಮ್‌ದಾಸ್ ಎಸ್ ಶ್ರೀಯಾನ್, ಬ್ಯಾಂಕಿನ ಸಲಹೆಗಾರರಾದ ಶ್ರೀ ಆನಂದ ಎನ್ ಪುತ್ರನ್‌ರವರು ಹಾಗೂ ಪ್ರಭಾರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಿ ಕೆ ಶೀನಾರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!