ಕೊಡಗಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ಕುಸಿತ : ವಾಹನ ಸಂಚಾರ ಬಂದ್

ಮಡಿಕೇರಿ: ಕೊಡಗು‌ ಜಿಲ್ಲೆಯಾದ್ಯಂತ ಮಳೆ ಆರ್ಭಟಿಸುತ್ತಿದೆ. ಭಾಗಮಂಡಲ ಜಲಾವೃತವಾಗಿದ್ದು, ಭಾಗಮಂಡಲ- ನಾಪೋಕ್ಲು‌ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ವಾಹನ ಸಂಚಾರ ಸ್ಥಗಿತವಾಗಿದೆ.
ಮಡಿಕೇರಿ, ಜೋಡುಪಾಲ, ಕಾಟಕೇರಿ, ಅಪ್ಪಂಗಳ, ವಿರಾಜಪೇಟೆ, ಪೊನ್ನಂಪೇಟೆ, ಶ್ರೀಮಂಗಲ ವ್ಯಾಪ್ತಿಯಲ್ಲಿ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥದಲ್ಲಿ ಅಪಾರ‌ ಪ್ರಮಾಣದ ನೀರು ಹರಿಯುತ್ತಿದೆ.

ಕೊಡಗಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ಹೆದ್ದಾರಿಯ ವಾಟೆಕೊಲ್ಲಿ (ಪೆರುಂಬಾಡಿ – ಮಾಕುಟ್ಟ) ಎಂಬಲ್ಲಿ ರಸ್ತೆ ಕುಸಿತವಾಗಿದ್ದು ವಾಹನ ಸಂಚಾರ ಬಂದ್ ಆಗಿದೆ. ಕಳೆದ ವರ್ಷವೂ ಈ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ, ಮೂರು ತಿಂಗಳು‌ ವಾಹನ ಸಂಚಾರ ಬಂದ್ ಆಗಿತ್ತು.

      

ಕೇರಳಕ್ಕೆ ತೆರಳುವ ವಾಹನಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿವೆ.

ಬೆಳಿಗ್ಗೆ ತಹಶೀಲ್ದಾರ್, ಲೋಕೋಪಯೋಗಿ ಇಂಜಿನಿಯರ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು. ರಸ್ತೆಯನ್ನುತಾತ್ಕಾಲಿಕವಾಗಿ ದುರಸ್ತಿಪಡಿಸುವ ಉದ್ಧೇಶದಿಂದ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮೂರು ದಿನಗಳವರೆಗೆ ಪೆರುಂಬಾಡಿ ಚೆಕ್ ಪೋಸ್ಟ್ ನಿಂದ ಮಾಕುಟ್ಟ ಚೆಕ್ ಪೋಸ್ಟ್ ವರೆಗಿನ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಗೊಳಿಸಿದ ನಂತರ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ಮುಕ್ತಗೊಳಿಸಿ, ಶಾಶ್ವತವಾಗಿ ರಸ್ತೆಯನ್ನು ದುರಸ್ತಿಗೊಳಿಸಲು ಕ್ರಮ ವಹಿಸಲಾಗುವುದು, ಆದ್ದರಿಂದ ಸಾರ್ವಜನಿಕರು ಸಹಕರಿಸಲು ಜಿಲ್ಲಾಡಳಿತ ಕೋರಿದೆ.

Leave a Reply

Your email address will not be published. Required fields are marked *

error: Content is protected !!