ಕಟಪಾಡಿ : ಕೃಷಿ ಕೆಲಸಕ್ಕಾಗಿ ಗದ್ದೆಗಿಳಿದ ಐಸಿವೈಎಂ ಕಟಪಾಡಿ ಯುವಜನರು

ಭಾರತೀಯ ಕಥೊಲಿಕ್ ಯುವ ಸಂಚಾಲನ (ಐಸಿವೈಎಂ) ಮತ್ತು ಯುವ ವಿದ್ಯಾರ್ಥಿ ಸಂಚಾಲನ (ವೈಸಿಎಸ್)ಉಡುಪಿ ಧರ್ಮಪ್ರಾಂತ್ಯದ ಆದೇಶದಂತೆ, ಆಧುನಿಕ ಕಾಲದಲ್ಲಿ ಕೃಷಿಯಿಂದ ದೂರ ಸರಿದಿರುವ ಯುವಜನರು, ಅದರ ಬಗ್ಗೆ ಮಾಹಿತಿ ಮತ್ತು ಬೇಸಾಯ ಮಾಡಬೇಕು ಎಂಬ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂತ ವಿನ್ಸೆಂಟ್ ದಿ ಪಾವ್ಲ್ ಚರ್ಚ್ ಕಟಪಾಡಿ ಇದರ ಐಸಿವೈಎಮ್ ಮತ್ತು ವೈಸಿಎಸ್ ಘಟಕದ ಸದಸ್ಯರು ಉತ್ಸಾಹದಿಂದ ನಡೆಸುವುದರ ಮೂಲಕ ತಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ಒಂದಿಷ್ಟು ಹೊತ್ತು ಬ್ರೇಕ್ ನೀಡಿ ಗದ್ದೆಗೆ ಇಳಿಯುವುದರ ಮೂಲಕ ಯುವಜನರಿಗೆ ಮಾದರಿಯಾದರು.

ಕಟಪಾಡಿ ಮಣಿಪುರ ಪರಿಸರದ ಹಿರಿಯ ಕೃಷಿ ಕುಟುಂಬವಾದ ದಿವಂಗತ ಲೊರೇನ್ಸ್ ಡಿಸೋಜಾರವರ ಪತ್ನಿ ಮಾರ್ಸೆಲಿನ್ ಡಿಸೋಜಾರವರ ಗದ್ದೆಯಲ್ಲಿ ನಾಟಿ ನೆಡುವುದರ ಮೂಲಕ ಐಸಿವೈಎಂ ಕಟಪಾಡಿ ಘಟಕದ ಯುವಜನರು ಶಿಕ್ಷಣದೊಂದಿಗೆ ತಮ್ಮ ಸಂಘಟನೆಯಲ್ಲಿಯೂ ತಮ್ಮ ಚತುರತೆಯನ್ನು ತೋರ್ಪಡಿಸಿದರು. ನೇಜಿ ನಾಟಿ ಯನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಮಾರ್ಸೆಲಿನ್ ಡಿಸೋಜಾ ಅವರ ಮೊಮ್ಮಕ್ಕಳೊಂದಿಗೆ ಉದ್ಘಾಟಿಸಿದರು. ಬಳಿಕ ತಮ್ಮ ಕೃಷಿ ಅನುಭವವನ್ನು ಯುವ ಜನರೊಂದಿಗೆ ಹಂಚಿಕೊಂಡರು.

ಸಂತ ವಿನ್ಸೆಂಟ್ ದಿ ಪಾವ್ಲ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ರೋನ್ಸನ್ ಡಿಸೋಜಾರವರು ಸ್ವತಃ ಗದ್ದೆಗೆ ಇಳಿದು ಯುವಜನರ ಜೊತೆಯಲ್ಲಿ ನೇಜಿಯನ್ನು ನಾಟಿ ಮಾಡಿದರು.

ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ರವರು ಪ್ರಸ್ತುತ ವರ್ಷವನ್ನು ಯುವಜನರ ವರ್ಷವೆಂದು ಘೋಷಣೆ ಮಾಡಿದ್ದು, ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಐಸಿವೈಎಂ ಕೇಂದ್ರೀಯ ಸಮಿತಿಯ ಸೂಚನೆಯಂತೆ, ಧರ್ಮಪ್ರಾಂತ್ಯದ ವಿವಿಧ ದೇವಾಲಯಗಳಲ್ಲಿ ಐಸಿವೈಎಂ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಯುವಜನರ ಉತ್ಸಾಹದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಟಪಾಡಿ ಸಂತ ವಿನ್ಸೆಂಟ್ ಡಿ ಪೌಲ್ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ. ರೋನ್ಸನ್ ಡಿಸೋಜಾ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರಿಲ್ಲದೆ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ. ಕೂಲಿ ಕೊಟ್ಟು ಕೃಷಿ ನಡೆಸಲು ಸಾಧ್ಯವಿಲ್ಲದೆ ಕೃಷಿ ಭೂಮಿ ಹಡಿಲು ಬೀಳುತ್ತಿದೆ. ಕೃಷಿಕ ಕುಟುಂಬಗಳ ಯುವ ಜನರು ಕೆಲಸಕ್ಕಾಗಿ ನಗರದತ್ತ ಹೊರಟಿರುವ ಸಂದರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯುತ್ತಿದ್ದು ಇದರಿಂದ ಯುವಜನರಿಗೆ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಲು ಸಾಧ್ಯವಾಗುತ್ತದೆ ಎಂದರಲ್ಲದೆ ಯುವಜನರ ಉತ್ಸಾಹದ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಎರಡು ವರ್ಷಗಳ ಹಿಂದೆ ಕಟಪಾಡಿ ಘಟಕದ ಸದಸ್ಯರು ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಯುವಜನರಿಗೆ ‘ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮವನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.ಐಸಿವೈಎಂ ಕಟ್ಪಾಡಿ ಘಟಕದ ಅಧ್ಯಕ್ಷೆ ಲಿವಿಯಾ ಪಿರೇರ ಸ್ವಾಗತಿಸಿದರೆ, ಕಾರ್ಯದರ್ಶಿ ಮೆಲಿಶಾ ಡಿಸೋಜಾ ಧನ್ಯವಾದ ಸಮರ್ಪಿಸಿದರು.

ಹಿರಿಯ ಕೃಷಿಕರಾದ ಲೆಸ್ಲಿ ಸುವಾರಿಸ್, ಸಚೇತಕರಾದ ವಿಲ್ಫ್ರೇಡ್ ಲೂವಿಸ್ ಮತ್ತು ಬ್ರಾಯನ್ ಕೊರೆಯಾ ಉಪಸ್ಥಿತರಿದ್ದು, ಯುವಜನರಿಗೆ ಪ್ರೋತ್ಸಾಹ ನೀಡಿದರು. ಘಟಕದ 36 ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!