ಗದ್ದೆಯ ಕೆಸರಲ್ಲಿ ಮಿಂದೆದ್ದ ಬಡಗುಬೆಟ್ಟು ಜನತೆ

ಉಡುಪಿ – “ಹಿಂದಿನ ಕಾಲದ ಕ್ರೀಡೆ ಮತ್ತು ಸಂಸ್ಕೃತಿಯನ್ನು ಜನ ಮರೆತಿದ್ದಾರೆ, ಯುವಕರು ಇಂತಹ ಕಾರ್ಯಕ್ರಮ ಆಯೋಜನೆ ಮಾಡುವುದರೊಂದಿಗೆ ಹಿಂದಿನ ಜಾನಪದ ಶೈಲಿಯ ಆಚಾರ-ವಿಚಾರಗಳು ಯುವ ಪೀಳಿಗೆಗಳು ಮುನ್ನೆಡಸಿಕೊಂಡು ಹೋಗಲು ಸಹಾಯವಾಗುತ್ತದೆ ” ಎಂದು ಫ್ರೆಂಡ್ಸ್ ಬಡಗುಬೆಟ್ಟು ಮತ್ತು 80ನೇ ಬಡಗುಬೆಟ್ಟು ಬಿಜೆಪಿ ಗ್ರಾಮ ಸಮಿತಿ ಆಯೋಜಿಸಿದ “ಬಲೇ ಕೆಸರ್ಡ್ ಗೊಬ್ಬುಲೆ”  ಗ್ರಾಮೀಣ ಕ್ರೀಡಾಕೂಟವನ್ನು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿ ಮಾತನಾಡಿದರು.

ಮಳೆಗಾಲದಲ್ಲಂತೂ ಕೆಸರುಗದ್ದೆ ಕ್ರೀಡೆ ಈಗ ಸಾಮಾನ್ಯವಾಗಿದೆ. ಜನರ ಉತ್ಸಾಹ ಹೆಚ್ಚುತ್ತಿದೆ. ಕಳೆದ 4 ವರ್ಷಗಳಿಂದ ಬಡಗುಬೆಟ್ಟು ಪರಿಸರದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಿದ ಸಂಸ್ಥೆ ಫ್ರೆಂಡ್ಸ್ ಬಡಗುಬೆಟ್ಟು ಮತ್ತು 80ನೇ ಬಡಗುಬೆಟ್ಟು ಬಿಜೆಪಿ ಗ್ರಾಮ ಸಮಿತಿ. ಸಾರ್ವಜನಿಕರು ನೀಡಿದ ಪ್ರೀತಿ ವಿಶ್ವಾಸದಿಂದ ಐದನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ “ಬಲೇ ಕೆಸರ್ಡ್ ಗೊಬ್ಬುಲೆ” ಕ್ರೀಡಾಕೂಟವನ್ನು  ಹಮ್ಮಿಕೊಂಡಿದೆ.  ಕರಾವಳಿಯ ಜಾನಪದ ಕ್ರೀಡೆಗಳಲ್ಲಿ ಕೆಸರುಗದ್ದೆ ಕ್ರೀಡೆ ಎಂದರೆ ಸಾರ್ವಜನಿಕರಿಗೆ ಅತೀವ ಪ್ರೀತಿ. ಇಂತಹ ಸ್ಪರ್ಧೆಗಳಲ್ಲಿ ಗದ್ದೆಗೆ ಇಳಿಯದವರು ಕೂಡ ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ.

ಜಾತಿ ಮತ ಭೇದವಿಲ್ಲದೆ ಹಿರಿಯ ಕಿರಿಯ ಇದೆಲ್ಲವನ್ನೂ ಮರೆತು ಮಕ್ಕಳು ಯುವಜನರು ಹಿರಿಯರು ಎಲ್ಲರೂ ಭಾಗವಹಿಸುತ್ತಾರೆ. ಕೆಸರನ್ನು ಚಿಮ್ಮಿಸುತ್ತಾ ಗುರಿಯನ್ನು ತಲುಪಲು ಎದ್ದು ಬಿದ್ದು ಓಡುತ್ತಾರೆ. ಆಗಸ್ಟ್ 11ರಂದು ಆದಿತ್ಯವಾರ ಬೆಳಿಗ್ಗೆ 8 ಗಂಟೆಗೆ ಬಡಗುಬೆಟ್ಟು ಕಂಬಳ ಗದ್ದೆಯ ಬಳಿ “ಬಲೇ ಕೆಸರ್ಡ್ ಗೊಬ್ಬುಲೆ” ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ವಹಿಸಿದ್ದರು . ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ,ಪ್ರಮುಖರಾದ ಉಪೇಂದ್ರ ನಾಯಕ್, ಅನಿಲ್ ಶೆಟ್ಟಿ ಓಂತಿಬೆಟ್ಟು, ರತನ್ ರಾಜ್, ಪ್ರಕಾಶ್ ನಾಯಕ್, ಸುಬ್ರಾಯ ಆಚಾರ್, ಜಯರಾಜ್ ಹೆಗ್ಡೆ , ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿ , ಉಪಾಧ್ಯಕ್ಷೆ ಮಾಲತಿ ನಾಯಕ್, ತಾ .ಪಂ ಸದಸ್ಯೆ ಶರ್ಮಿಳಾ ಮಾಧವ್ ಪೂಜಾರಿ ಉದ್ಘಾಟನಾ ಸಮಾರಂಭದಲ್ಲಿ ಅಥಿತಿಗಳಾಗಿ ಭಾಗವಹಿಸಿದ್ದರು .

ಕಣ್ಮನ ಸೆಳೆದ ಕ್ರೀಡಾಕೂಟ

ಪುರುಷರಿಗೆ 100 ಮೀಟರ್ ಓಟ, ಕಾರ್ ಕಂಬಳ,  ಐದು ಕಾಲಿನ ಓಟ, ಉಪ್ಪು ಮುಡಿ, ಪಿರಮಿಡ್, ಹಗ್ಗಜಗ್ಗಾಟ, ತಪ್ಪಂಗಾಯಿ, ಹಾಳೆ ಬಂಡಿ, ಮಹಿಳೆಯರಿಗಾಗಿ 100 ಮೀಟರ್ ಓಟ, ಮಡಕೆ ಒಡೆಯುವುದು , ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಹಾಳೆ ಬಂಡಿ, ಮಡಕೆಗೆ ನೀರು ತುಂಬಿಸುವುದು ಮತ್ತು ಮಕ್ಕಳಿಗಾಗಿ 50 ಮೀಟರ್ ಓಟ, ರಿಲೇ ಓಟ , ಸೊಪ್ಪಿನಾಟ, ಹಾಳೆ ಬಂಡಿ, ಸಂಗೀತ ಕುರ್ಚಿ ಸಹಿತ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಫ್ರೆಂಡ್ಸ್ ಬಡಗುಬೆಟ್ಟು ಸಂಸ್ಥೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ, ಕಣ್ಣಿನ ಚಿಕಿತ್ಸಾ ಶಿಬಿರ ಸಹಿತ ವಿವಿಧ ಕಾರ್ಯಕ್ರಮಗಳನ್ನು ಬಡಗುಬೆಟ್ಟು ಪರಿಸರದಲ್ಲಿ ಸಾರ್ವಜನಿಕರಿಗೆ ಹಮ್ಮಿಕೊಂಡು ಸಾರ್ವಜನಿಕರ ಪ್ರೀತಿಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

error: Content is protected !!