ಯಾವುದೇ ಶಾಸಕರನ್ನು ರಾಜೀನಾಮೆ ಕೊಡಿಸಿ ಬೀದಿಗೆ ತಂದು ನಿಲ್ಲಿಸಬೇಡಿ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ನಿಮ್ಮ ಸರ್ಕಾರವನ್ನು ಬೀಳಿಸಲ್ಲ. ಹೀಗಾಗಿ ಯಾವುದೇ ಶಾಸಕರನ್ನು ರಾಜೀನಾಮೆ ಕೊಡಿಸಿ ಅವರನ್ನು ಬೀದಿಗೆ ತಂದು ನಿಲ್ಲಿಸಬೇಡಿ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಬಹುಮತ ಸಾಬೀತು ನಡೆಸುವುದಕ್ಕೂ ಮುನ್ನ ಮಾತನಾಡಿದ ಅವರು, ನೀವು ಇನ್ನು ತುಂಬಾ ಶಾಸಕರನ್ನು ರಾಜೀನಾಮೆ ಕೊಡಿಸುವುದಕ್ಕೆ ಸಿದ್ಧರಾಗಿದ್ದೀರಿ ಎನ್ನುವುದು ಗೊತ್ತಿದೆ. ನಮಗೆ ಮಾಹಿತಿ ಇದೆ. ಅದನ್ನು ದಯವಿಟ್ಟು ಸ್ವಲ್ಪ ಸಮಯ ನಿಲ್ಲಿಸಿ. ಅವರನ್ನು ಸ್ಥಾನ ಪಲ್ಲಟ ಮಾಡಿಸಿ ಬೀದಿಗೆ ನಿಲ್ಲಿಸಬೇಡಿ ಎಂದು ಬಿಜೆಪಿ ನಾಯಕರ ವಿರುದ್ಧ ಚಾಟಿ ಬೀಸಿದರು.
ರೈತರ ಸಾಲಮನ್ನಾ ವಿಚಾರವಾಗಿ ನೀವು ಬಾಯಿಗೆ ಬಂದಂತೆ ಮಾತನಾಡಿದರು. ಈಗ ಅಧಿಕಾರ ನಿಮ್ಮ ಕೈಯಲ್ಲಿದೆ. ದಾಖಲೆ ಸಮೇತ ಮಾಹಿತಿಯನ್ನು ಮುಂದಿನ ಅಧಿವೇಶನದಲ್ಲಿ ಇಡಿ. ಎಲ್ಲಿ ಲೋಪ ಆಗಿದೆ ಎನ್ನುವುದನ್ನು ಮೊದಲು ಹೇಳಿ. ಬಾಯಿ ಚಪಲಕ್ಕೆ ಮಾತಾನಾಡಬೇಡಿ ಎಂದು ಕಿಡಿಕಾರಿದರು.
ನಾನು ಹದಿನಾಲ್ಕು ತಿಂಗಳಲ್ಲಿ ಜನರಿಗೆ ಸ್ಪಂದನೆ ಕೊಟ್ಟಿದ್ದೇನೆ. ಸಾಲ ಮನ್ನಾದ ವಿಚಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮೈತ್ರಿ ಸರ್ಕಾರದ ಅಂತಿಮ ಹಂತದಲ್ಲಿ ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಕಿತ ಪಡೆದಿದ್ದೇವೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!