ಭಾಷಾ ಕೌಶಲವನ್ನು ಬೆಳೆಸದಿದ್ದರೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ

ಬಂಟ್ವಾಳ :ಭಾಷಾ ಕೌಶಲವನ್ನು ಬೆಳೆಸದಿದ್ದರೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ.ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ತಿಳಿದು ಅವರು ಬೆಳೆದು ಬಂದ ಪರಿಸರವನ್ನು ಅರ್ಥ ಮಾಡಿಕೊಂಡು ಅಧ್ಯಾಪಕರು ಬೋಧನೆ ಮಾಡಬೇಕು. ಕನ್ನಡ ಭಾಷಾ ಕಲಿಕೆಗೆ ವಿಶೇಷ ಮಹತ್ವನ್ನು ನೀಡಬೇಕಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇಲ್ಲಿನ ಉಪನ್ಯಾಸಕ ಗುರು ಸಿದ್ಧಲಿಂಗಯ್ಯ ಹೇಳಿದರು.

ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಮಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇವರ ಸಹಕಾರದಲ್ಲಿ ಏರ್ಪಡಿಸಲಾದ ೫ ದಿನಗಳ ಜಿಲ್ಲಾ ಮಟ್ಟದ ಕನ್ನಡ ಭಾಷಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರವನ್ನು ಕರ್ನಾಟಕ ಪ್ರೌಢ ಶಾಲೆ ಮಾಣಿಯಲ್ಲಿ ಆ.೨೬ ರಂದು ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು ಮುಖ್ಯ ಅತಿಥಿಯಾಗಿ ಮಾತನಾಡಿ ಶಿಕ್ಷಕರಿಗೆ ವಿಷಯ ಸಂಪದೀಕರಣ ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಇಲಾಖೆ ನಡೆಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಬಹುದು ಎಂದರು.

ವೇದಿಕೆಯಲ್ಲಿ ಕರ್ನಾಟಕ ಪ್ರೌಢ ಶಾಲೆಯ ಕಾರ್ಯದರ್ಶಿ ಇಬ್ರಾಹಿಂ ಕೆ. ಮಾಣಿ , ಮುಖೋಪಾಧ್ಯಾಯ ಬಿ.ಕೆ. ಭಂಡಾರಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಣೇಶ್ ಪಜೀರು, ವಲಯ ಸಂಪನ್ಮೂಲ ವ್ಯಕ್ತಿ ಸತೀಶ ರಾವ್, ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ನಾರಾಯಣ ಗೌಡ , ಗೋಪಾಲಕೃಷ್ಣ ನೇರಳೆಕಟ್ಟೆ , ಜಯಪ್ರಕಾಶ್ ಸುಜೀರ್ ಭಾಷಾ ಬೋಧನೆ ಮತ್ತು ಕಲಿಕೆಯ ವಿವಿಧ ಆಯಾಮಗಳನ್ನು ತಿಳಿಸಿಕೊಟ್ಟರು. ಜಿಲ್ಲೆಯ ಪ್ರೌಢ ಶಾಲೆಗಳ ಕನ್ನಡ ಭಾಷಾ ಬೋಧಕರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!