ಬುಲ್ ಟ್ರಾಲ್,ಲೈಟ್ ಫಿಶಿಂಗ್ ನಡೆಸಿದಲ್ಲಿ ಸಬ್ಸಿಡಿ ಕಡಿತಗೊಳಿಸಿ: ಆದೇಶ

ಉಡುಪಿ : ಬುಲ್ ಟ್ರಲ್ ಮತ್ತು ಬೆಳಕು ಮೀನುಗಾರಿಗೆ ನಡೆಸುವ ಬೋಟ್‍ಗಳಿಗೆ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸರಕಾರದ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಸೂಚಿಸಿದ್ದಾರೆ.


ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಜಿಲ್ಲಾಭಿವೃದ್ಧಿ, ಮರಳು ಸಮಸ್ಯೆ ಹಾಗೂ ನೆರೆ ಪರಿಹಾರಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸರಕಾರವು ಬುಲ್‍ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆಯನ್ನು ನಿಷೇಧಿಸಿದ್ದರೂ ಸಹ, ಇವುಗಳನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದ ಮಹೇಶ್ವರ ರಾವ್, ನಿಷೇಧ ಉಲ್ಲಂಘಿಸುವ ಬೋಟ್‍ಗಳಿಗೆ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವಂತೆ ಹಾಗೂ ಇಂತಹ ಬೋಟ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಅತೀ ಹೆಚ್ಚಿನ ದಂಡ ವಿಧಿಸುವ, ಲೈಸೆನ್ಸ್ ರದ್ದುಗೊಳಿಸುವ ಕುರಿತಂತೆ ಕರ್ನಾಟಕ ಮರೈನ್ ಫಿಷಿಂಗ್ ಕಾಯ್ದೆಯಲ್ಲಿ
ಸೂಕ್ತ ತಿದ್ದುಪಡಿ ಮಾಡುವ ಬಗ್ಗೆ ಹಾಗೂ ಇವುಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ತಂಡ ರಚಿಸುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.


ಬೆಳಕು ಮೀನುಗಾರಿಕಾ ತಡೆಯುವ ನಿಟ್ಟಿನಲ್ಲಿ ಬಂದರು ದ್ವಾರದಲ್ಲೇ ಜನರೇಟರ್
ತೆಗೆದುಕೊಂಡು ಹೋಗುವುದನ್ನು ತಡೆಯುವಂತೆ ಹಾಗೂ ಈ ಬಗ್ಗೆ ಪೊಲೀಸ್ ಇಲಾಖೆಯ ನೆರವು ಪಡೆಯುವಂತೆ ಸೂಚಿಸಿದ ಅವರು, ಮೀನುಗಾರಿಕೆ ತೆರಳುವವರ ಸರಿಯಾದ ಮಾಹಿತಿ ಹೊಂದುವ ನಿಟ್ಟಿನಲ್ಲಿ ಡೀಸೆಲ್ ಬಂಕ್‍ನಲ್ಲಿಯೇ ಬೋಟ್‍ನಲ್ಲಿ ತೆರಳುವವರ ಸಂಪೂರ್ಣ ವಿವರ ಪಡೆಯುವಂತೆ ಹಾಗೂ ಸಮುದ್ರದಲ್ಲಿ ಬೋಟ್‍ಗಳನ್ನು ಸರಿಯಾದ ರೀತಿಯಲ್ಲಿ ಪತ್ತೆ ಹಚ್ಚುವ ಕುರಿತಂತೆ ಬೋಟ್ ಟ್ರಾಕಿಂಗ್ ಸಿಸ್ಟಂ ನನ್ನು ಎಲ್ಲಾ ಬೋಟ್‍ಗಳಲ್ಲಿ ಅಳವಡಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ವರ್ಕಿಂಗ್ ವುಮನ್ ಹಾಸ್ಟೆಲ್‍ನ ನಿರ್ಮಾಣ ಕುರಿತಂತೆ ಅದರ ಅಗತ್ಯತೆ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ತಿಳಿಸಿದ ಕಾರ್ಯದರ್ಶಿ, ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ತಾಯಂದಿರ ಮಾಹಿತಿ ಸಂಗ್ರಹಿಸಿ, ನಿಯಮಿತವಾಗಿ ಅವರನ್ನು ತಪಾಸಣೆ ನಡೆಸಿ, ಅಪೌಷ್ಠಿಕತೆಯನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಮತ್ತು ಮಹಿಳಾ ಮಕ್ಕಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದರು.


ಜಿಲ್ಲೆಯಲ್ಲಿ ಜಾಗತಿಕ ಮನ್ನಣೆ ಪಡೆದಿರುವ ಬೆಳೆಗಳಾದ ಮಟ್ಟುಗುಳ್ಳ ಮತ್ತು ಉಡುಪಿ ಮಲ್ಲಿಗೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃಧ್ದಿಗೊಳಿಸಿ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಕಾರ್ಯದರ್ಶಿ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ, ಕಳೆದ ಬಾರಿ ಟ್ಯಾಂಕರ್‍ನಲ್ಲಿ ನೀರು ನೀಡಿರುವ ಗ್ರಾಮಗಳಿಗೆ ಶಾಶ್ವತ ಪರಿಹರ ಕಲ್ಪಿಸುವಂತೆ ಹಾಗೂ ಈ ಬಾರಿ ಮತ್ತೆ ಟ್ಯಾಂಕರ್‍ನಲ್ಲಿ ನೀರು ಕೊಡುವ ಸನ್ನಿವೇಶ ಬರದಂತೆ ಅಗತ್ಯ ಕಾರ್ಯ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದರು.


ಅಕ್ಟೋಬರ್ ಮಾಹೆಯಲ್ಲಿ ಮಳೆಯಿಂದಾದ ಹಾನಿಯಾದ ವಿವರ ಸಂಗ್ರಹಿಸಿ, ಪರಿಹಾರ ನೀಡುವ ಕಾರ್ಯ ಶೀಘ್ರದಲ್ಲಿ ನೀಡುವಂತೆ ಕಾರ್ಯದರ್ಶಿ ತಿಳಿಸಿದರು.
ಮಳೆಯಿಂದಾಗಿ ಕೃಷಿಗೆ ಭಾರಿ ನಷ್ಟದ ಜೊತೆಗೆ ಅಡಿಕೆ ಬೆಳೆಗೆ ಕೊಳೆ ರೋಗದ ಸಮಸ್ಯೆ
ಎದುರಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಸರಕಾರದಿಂದ ಸರ್ವೇ ನಡೆಸಲು ಜಿಲ್ಲಾಧಿಕಾರಿ ಜಿ.
ಜಗದೀಶ್ ಕೋರಿದರು. ಡೀಮ್ಡ್ ಫಾರೆಸ್ಟ್ ಸರ್ವೇ ಕಾರ್ಯವನ್ನು ಶೀಘ್ರದಲ್ಲಿ ನಡೆಸಬೇಕು ಹಾಗೂ ಜಂಟಿ ಸರ್ವೇ ನಡೆಸಿ ಆರ್‍ಟಿಸಿ ಮಾಡುವ ಮೂಲಕ ಕೆಲಸ ಶೀಘ್ರ ನಡೆಯುವಂತೆ ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.


ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ
ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳಿಸುವ ಮೂಲಕ ಗುರಿ ಸಾಧಿಸುವಂತೆ ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಎಂ. ಮಹೇಶ್ವರ ರಾವ್ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ
ರಾಜು, ಸಿಇಒ ಪ್ರೀತಿ ಗೆಹಲೋತ್, ಎಸ್.ಪಿ ನಿಶಾ ಜೇಮ್ಸ್ ಹಾಗೂ ವಿವಿಧ ಇಲಾಖೆಯ
ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!