ಬೈಕಿಗೆ ಬುಲೆಟ್ ಡಿಕ್ಕಿ, ಮಹಿಳಾ ಪೊಲೀಸ್ ಸಾವು, ಅರಣ್ಯ ಸಿಬ್ಬಂದಿ ಗಂಭೀರ 

ಬೈಕೊಂದಕ್ಕೆ ಬುಲೆಟ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಭಾಸಿ ಆನೆಗುಡ್ಡೆ ಗಣಪತಿ ಮುಖಮಂಟಪದ ಎದುರು ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಉಡುಪಿ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಹೇಮಾ(32) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಹೇಮಾ ಅವರ ಪತಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎರಡನೇ ದರ್ಜೆಯ ಸಹಾಯಕ (ಕ್ಲಾರ್ಕ್) ಆಗಿರುವ ಬೈಂದೂರು ಸಮೀಪದ ತೆಗ್ಗರ್ಸೆ ನಿವಾಸಿ ನಾಗರಾಜ್ ಕೋತ್ವಾಲ್(35) ಎಂದು ಗುರುತಿಸಲಾಗಿದೆ.

ಅಪಘಾತಕ್ಕೆ ಕಾರಣವಾದ ಬುಲೆಟ್ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲಾ. ನಾಗರಾಜ್ ಮತ್ತು ಅವರ ಪತ್ನಿ ಹೇಮಾ ಅರಣ್ಯ ಅಧಿಕಾರಿಯೊಬ್ಬರ ಬೀಳ್ಕೊಡುಗೆ ಪ್ರಯುಕ್ತ ಗಾಯತ್ರಿ ಹಾಲ್ನಲ್ಲಿ ನಡೆದ ಪಾರ್ಟಿ ಮುಗಿಸಿ ಬೈಕ್ ನಲ್ಲಿ ರಸ್ತೆ ದಾಟುತ್ತಿದ್ದಂತೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದ ಬುಲೆಟ್ ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಹೇಮ ನೇರವಾಗಿ ರಸ್ತೆಗೆಸೆಯಲ್ಪಟ್ಟ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ನಾಗರಾಜ್ ಕೊತ್ವಾಲ್ ಅವರೂ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿದ್ದು, ಮಣಿಪಾಲದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿದ್ದು, ಪರಿಸೀಲಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!