ಮೀನು ಮಾರಾಟ ಫೆಡರೇಶನ್ ಗೆ ರೂ.4.48 ಕೋಟಿ ಲಾಭ : ಯಶ್‌ಪಾಲ್ ಸುವರ್ಣ

ಕರ್ನಾಟಕ ರಾಜ್ಯ ಸರಕಾರದ ಮೀನುಗಾರಿಕ ಇಲಾಖೆ, ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳು, ವೈಯಕ್ತಿಕ ಸದಸ್ಯರು ಹಾಗೂ ಸಮಸ್ತ ಮೀನುಗಾರರ ಸಹಕಾರದಿಂದ ಮೀನು ಮಾರಾಟ, ಡೀಸಿಲ್ ಮಾರಾಟ, ಬ್ಯಾಂಕಿಂಗ್ ವ್ಯವಹಾರ, ಮೋಬಿಲ್ ಎಣ್ಣೆ ಮಾರಾಟ, ಸೀಮೆಎಣ್ಣೆ ಹಾಗೂ ಮೀನುಗಾರಿಕಾ ಸಲಕರಣೆಗಳ ಮಾರಾಟ ಮತ್ತು ಮಂಜುಗಡ್ಡೆ ವ್ಯವಹಾರಗಳಿಂದ 250 ಕೋಟಿ ವ್ಯವಹಾರ ಮಾಡಿ ನಿರ್ವಹಣಾ ವೆಚ್ಚ, ಸವಕಳಿ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಕಳೆದು ರೂ. 4.48 ಕೋಟಿ ನಿವ್ವಳ ಲಾಭ ದಾಖಲಿಸಿರುವುದಾಗಿ ಫೆಡರೇಶನಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ.

ಮೀನುಗಾರರ ಸಮಗ್ರ ಅಭಿವೃದ್ಧಿಯ ಧ್ಯೇಯದೊಂದಿಗೆ ಸ್ಥಾಪನೆಗೊಂಡ ಈ ಸಂಸ್ಥೆ ಮೀನುಗಾರರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಹಕರಿಸುತ್ತಾ ಮೀನುಗಾರರ ಸ್ವಾವಲಂಬನೆಗಾಗಿ ಪ್ರಯತ್ನಿಸುತ್ತಿದ್ದು, ಹಿಂದಿನ ಹಲವು ವರ್ಷಗಳಿಂದ ಹಲವಾರು ತಾಂತ್ರಿಕ ಕಾರಣಗಳಿಂದ ನಷ್ಟದಲ್ಲಿದ್ದ ಈ ಸಂಸ್ಥೆಯು ಮೀನುಗಾರಿಕೆಯಲ್ಲಿ ಉಂಟಾದ ಏರಿಳಿತಗಳ ಸಮಸ್ಯೆಯನ್ನು ಎದುರಿಸಿಕೊಂಡು ಇತ್ತೀಚಿನ 10 ವರ್ಷಗಳಲ್ಲಿ ಒಟ್ಟು ೨೮ ಕೋಟಿ ಲಾಭ ಗಳಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿದೆ.

ಮಲ್ಪೆ ಮತ್ತು ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಬ್ಯಾಂಕಿಂಗ್ ವಿಭಾಗದ ಶಾಖೆಯ ಮೂಲಕ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದು, ಫೆಡರೇಶನಿನ ಬ್ಯಾಂಕಿಂಗ್ ವಿಭಾಗ ಮೀನುಗಾರಿಕ ಸಲಕರಣೆಗಳ ಮಾರಾಟ ವಿಭಾಗ ಮತ್ತು ಫೆಡರೇಶನಿನ ಕಚೇರಿಗಳಲ್ಲಿ ಗಣಕೀಕರಣವನ್ನು ಅಳವಡಿಸಿ ಸದಸ್ಯರಿಗೆ ಆಧುನಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಗ್ರಾಹಕರಿಗೆ ಆರ್.ಟಿ.ಜಿ.ಎಸ್ ಸೌಲಭ್ಯ, ಇ-ಸ್ಟಾಂಪಿಂಗ್ ಮತ್ತು ಇತರ ಎಲ್ಲಾ ತರಹದ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಬ್ಯಾಂಕಿಂಗ್ ವಿಭಾಗದಲ್ಲಿ ಇನ್ನಷ್ಟು ಆಧುನಿಕ ಸೌಲಭ್ಯಗಳಾದ ಇ-ಬಿಕ್ಸ್ ನಗದು ಹಣ ವರ್ಗಾವಣೆ, (ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ) ಅಳವಡಿಸಿಕೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ.

2018-19 ನೇ ಸಾಲಿನಲ್ಲಿಯೂ ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳಿಗೆ ಡಾ| ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಮತ್ತು ಫೆಡರೇಶನಿನ ಜಂಟಿ ಆಶ್ರಯದಲ್ಲಿ ಉಚಿತವಾಗಿ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯ ಸಂಸ್ಥೆಯ ಸದಸ್ಯರ ಮತ್ತು ಸದಸ್ಯೇತರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಭಯ ಜಿಲ್ಲೆಯ ಬಡ ಮೀನುಗಾರರ ವೈದ್ಯಕೀಯ ಚಿಕಿತ್ಸೆಗಾಗಿ ಹಾಗೂ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸಂಸ್ಥೆ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

೩೦.೧೨.೨೦೧೮ ರಂದು ರಾಜ್ಯ ಸರಕಾರದ ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಮಲ್ಪೆಯಲ್ಲಿ ಆಯೋಜಿಸಿದ್ದ ಮತ್ಸ್ಯಮೇಳ ೨೦೧೮ ಸದಸ್ಯ ಸಹಕಾರಿ ಸಂಘಗಳ ಮತ್ತು ವೈಯಕ್ತಿಕ ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ೨೦೧೯-೨೦ನೇ ಸಾಲಿನಲ್ಲಿಯೂ ಮತ್ಸ್ಯಮೇಳ ವನ್ನು ಆಯೋಜಿಸುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ.

ಮಲೆನಾಡು ಮತ್ತು ಒಳನಾಡಿನ ಮೀನು ಪ್ರಿಯರಿಗೆ ಉತ್ತಮ ಪೌಷ್ಠಿಕಾಂಶ ಮತ್ತು ಜೀವಸತ್ವವುಳ್ಳ ತಾಜಾ ಮೀನಿನ ಖಾದ್ಯಗಳನ್ನು ತಯಾರಿಸಿ ಉಣಬಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಮತ್ಸ್ಯ ಕ್ಯಾಂಟೀನ್‌ಗಳನ್ನು ಆರಂಭಿಸುವ ಯೋಜನೆಗ ಈಗಾಗಲೇ ಚಾಲನೆ ನೀಡಲಾಗಿದೆ. ಬ್ಯಾಂಕಿಂಗ್ ವಿಭಾಗದ ವ್ಯವಹಾರವನ್ನು ವಿಸ್ತರಿಸುವ ದೃಷ್ಟಿಯಿಂದಉಳ್ಳಾಲ, ಬೈಕಂಪಾಡಿ, ಪಡುಬಿದ್ರಿ, ಕಾಪು, ಕುಂದಾಪುರ, ಕೋಟ, ಮತ್ತು ಬೈಂದೂರಿನಲ್ಲಿ ನೂತನ
ಶಾಖೆಗಳನ್ನು ಆರಂಭಿssಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಶೀಘ್ರದಲ್ಲಿಯೇ ಕಾಪು ಶಾಖೆ ಕಾರ್ಯಾರಂಭಿಸಲಿದೆ.

ಕರಾವಳಿ ಮೀನುಗಾರಿಕೆಯ ಹಲವೊಂದು ಸಮಸ್ಯೆಗಳ ಬಗ್ಗೆ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷರ ನೇತೃತ್ವದಲ್ಲಿ ಸಮಸ್ಯೆಯ ನಿವಾರಣೆಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಚಿವರನ್ನು ಭೇಟಿಯಾಗಿ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಕಾರದಿಂದ ಫೆಡರೇಶನ್ ವತಿಯಿಂದ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸಹಕಾರಿ ಸಂಸ್ಥೆಗಳಿಗೆ, ಮೀನುಗಾರ ಸಂಘಗಳಿಗೆ ಮತ್ತು ಎಲ್ಲಾ ವರ್ಗದ ಮೀನುಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ಆಧುನೀಕೃತ ಮೀನುಗಾರಿಕೆ ಮತ್ತು ಮೀನಿನ ಉತ್ಪನ್ನಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡುವ ಉದ್ದೇಶದಿಂದ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಯೋಜನೆ ರೂಪಿಸಿದ್ದು ಸಮುದ್ರ ಮೀನುಗಾರಿಕೆಯ ಜೊತೆಗೆ ಒಳನಾಡಿನ ಸಿಹಿ ನೀರಿನ ಮೀನುಗಾರಿಕೆಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ವೈಜ್ಞಾನಿಕ ರೀತಿಯಲ್ಲಿ ಒಳನಾಡಿನ ಮೀನು ಮರಿ ಉತ್ಪಾದನೆಯ ಬಗ್ಗೆ ಮತ್ತು ಮೀನು ಸಾಕಾಣಿಯ ಬಗ್ಗೆ ಪರಿಣಿತಿ ಹೊಂದಿರುವವರ ಸಹಕಾರವನ್ನು ಪಡೆದು ಮೀನು ಮರಿ ಉತ್ಪಾದನೆ ಮತ್ತು ಬಿತ್ತನೆಯ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ವರದಿ ಸಾಲಿನಲ್ಲಿ ಸರ್ವ ಸದಸ್ಯರ ಸಹಕಾರದಿಂದ ಫೆಡರೇಶನ್ ಗರಿಷ್ಠ ಲಾಭ ಗಳಿಸಿದ್ದು, ಮುಂದೆ ಕೂಡ ಸಂಸ್ಥೆಯ ಪ್ರಗತಿಗೆ ಸರ್ವ ಸದಸ್ಯರು ತಮ್ಮ ಸಲಹೆ ಸೂಚನೆಗಳ ಮೂಲಕ ಸಹಕರಿಸುವಂತೆ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!