ಕಿದಿಯೂರು ಹೊಟೇಲ್ಸ್‌ನ ಶ್ರೀನಾಗ ಸಾನ್ನಿಧ್ಯ: ನಾಗಮಂಡಲೋತ್ಸವ ಕಣ್ತುಂಬಿಕೊಂಡ ಭಕ್ತ ಸಮೂಹ

ಉಡುಪಿ, ಫೆ.1: ಕಿದಿಯೂರು ಹೊಟೇಲ್ಸ್‌ನ ಕಾರಣಿಕ ಶ್ರೀನಾಗ ಸಾನ್ನಿಧ್ಯದಲ್ಲಿ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವು ಧಾರ್ಮಿಕ ವಿಧಿ ವಿಧಾನ, ನಾಗದೇವರ ದರ್ಶನ ಸೇವೆಯ ಮೂಲಕ ಬುಧವಾರ ಸಂಪನ್ನಗೊಂಡಿತು.

ಜ. 26ರ ಬೆಳಗ್ಗೆ ಶ್ರೀ ನಾಗಸಾನ್ನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, ವಿವಿಧ ಹೋಮ ಹವನಾದಿಗಳು ನಡೆದು ಜ. 31 ರಂದು ಅಷ್ಟೋತ್ತರ ಶತಕಲಶಾಭಿಷೇಕ ಸಹಿತ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಹಾಲಿಟ್ಟುಸೇವೆ, ಗಂಗಾರತಿಯ ಅನಂತರ ಅಷ್ಟಪವಿತ್ರ ನಾಗಮಂಡಲೋತ್ಸವ ನೆರವೇರಿತು.

ಕಿದಿಯೂರು ಹೊಟೇಲ್ಸ್‌ನ ಎಂಡಿ ಭುವನೇಂದ್ರ ಕಿದಿಯೂರು ಅವರ ಸೇವಾರ್ಥ ನಾಗಮಂಡಲೋತ್ಸವ ಆಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್ ನೇತೃತ್ವದಲ್ಲಿ ಜೋತಿಷ వి. ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಶ್ರೀನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆ ನಡೆಯಿತು.

ರಮಾನಂದ ಭಟ್ ಬೆಳ್ಳರ್ಪಾಡಿ, ವೇ|ಮೂ| ಮುರಳೀಧರ ಭಟ್ ಅಲೆವೂರು ಅವರ ನಾಗ ದರ್ಶನದೊಂದಿಗೆ ಮುದ್ದೂರು ವೈದ್ಯನಾಥೇಶ್ವರ ಡಮರುಗ ಬಳಗದ ಕೃಷ್ಣಪ್ರಸಾದ್ ವೈದ್ಯರ ನೇತೃತ್ವದ ಬಾಲಕೃಷ್ಣ ವೈದ್ಯ, ನಟರಾಜ ವೈದ್ಯರ ನಾಗಕನ್ನಿಕಾ ನರ್ತನದೊಂದಿಗೆ ನೆರವೇರಿತು.

ಪೂಜೆ, ಅದಿವಾಸ ಸಹಿತ ಪ್ರಧಾನ ಸಾನ್ನಿಧ್ಯದಲ್ಲಿ ದರ್ಶನ ಸೇವೆ, ಹೋಮ, ಮೆರವಣಿಗೆ ನಾಗದರ್ಶನ ಮಧ್ಯಾಹ್ನ ನಡೆಯಿತು. ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಾ ಪಲ್ಲಪೂಜೆ ಮಾಡಿದರು. 50 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಅಚ್ಚುಕಟ್ಟಿನ ವ್ಯವಸ್ಥೆ

ಕಿದಿಯೂರು ಹೊಟೇಲ್ ಸಂಕೀರ್ಣ ಸೇರಿ ಕೇವಲ ಅರ್ಧ ಎಕರೆ 2 ಜಾಗದಲ್ಲಿ ನಗರದ ಹೃದಯಭಾಗದಲ್ಲಿ ವಾಹನ ಮತ್ತು ಜನಜಂಗುಳಿಯ ನಡುವೆ ಅತ್ಯಂತ ವ್ಯವಸ್ಥಿತವಾಗಿ ಅಚ್ಚುಕಟ್ಟಿನಿಂದ ಅದ್ದೂರಿಯಾದ ನಾಗ ಮಂಡಲೋತ್ಸವ ನೆರವೇರಿರುವುದು ವಿಶೇಷ. ನಾಗಮಂಡಲೋತ್ಸವದ ಯಶಸ್ಸಿನಲ್ಲಿ ಭುವನೇಂದ್ರ ಕಿದಿಯೂರು ಅವರ ಅಭಿಮಾನಿ, ಸ್ವಯಂಸೇವಕರ ಶ್ರಮ ಬಹಳಷ್ಟಿದೆ.

ಭಕ್ತರಿಗೆ ಗಂಗಾಜಲ ಸಂಪ್ರೋಕ್ಷಣೆ

ಕಾಶೀ ವಾರಾಣಸಿಯಿಂದ ತರಿಸಲಾದ ಪವಿತ್ರ ಗಂಗಾಜಲವನ್ನು ಭಕ್ತರಿಗೆ ಸಂಪ್ರೋಕ್ಷಣೆ ನಡೆಸಿ, (ನಾಗರಕ್ಷೆ) ದಾರ ವಿತರಿಸಲಾಯಿತು. ಸಂಜೆ ಹಾಲಿಟ್ಟು ಸೇವೆ, ಬಲಿ ಉತ್ಸವ, ಸೇವಾಕರ್ತರ ಪರಿವಾರದವರು ನಾಗಮಂಡಲದ ಸುತ್ತಲೂ ದೀಪ ಪ್ರಜ್ವಲಿಸಿ ಸಂಕಲ್ಪ ದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ನಾಗಮಂಡಲದ ಮಂಟಪದಲ್ಲಿ ವಾರಾಣಸಿಯ ಅರ್ಚಕ ವೃಂದದವ ರಿಂದ ಅಕರ್ಷಕ ಗಂಗಾರತಿ ನಡೆಯಿತು. ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.

ಹೀರಾ ಬಿ. ಕಿದಿಯೂರು, ಪುತ್ರ ಡಾ.ಬೃಜೇಶ್ ಕಿದಿಯೂರು ಮತ್ತು ಡಾ.ಶ್ವೇತಾ ಬ್ರಿಜೇಶ್ ದಂಪತಿ, ಪುತ್ರ ಡಾ.ಯಜೇಶ್ ಬಿ. ಕಿದಿಯೂರು ಮತ್ತು ಶಿಲ್ಪಾ ಯಜ್ಞಶ್ ದಂಪತಿ, ಪುತ್ರ ಜಿತೇಶ್ ಬಿ. ಕಿದಿಯೂರು ಮತ್ತು ಪ್ರಿಯಾಂಕಾ ಜಿತೇಶ್ ದಂಪತಿ, ಪುತ್ರಿ ಡಾ। ಭವ್ಯಶ್ರೀ ಅಭಿನ್ ಕಿದಿಯೂರು ಮತ್ತು ಡಾ| ಅಭಿನ್ ದೇವದಾಸ್ ಶ್ರೀಯಾನ್, ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್ ಸಾಲ್ಯಾನ್ ಮಸ್ಕತ್ ಹಾಗೂ ಕುಟುಂಬ ಸದಸ್ಯರು, ಆಯೋಜನ ಸಮಿತಿ ಪದಾಧಿಕಾರಿಗಳು, ಗಣ್ಯರು, ಹೊಟೇಲ್ಸ್‌ನ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!