ಹನಿಟ್ರ್ಯಾಪ್, ಪೊಲೀಸರಿಗೆ ಗುಂಡು: ಆರು ಬಂಧನ

ಮಡಿಕೇರಿ : ಯುವತಿಯೊಬ್ಬಳನ್ನು ಬಳಸಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಸಂಚಿನಲ್ಲಿ ಸಿಲುಕಿಸಿ, 3.80 ಲಕ್ಷ ರೂ. ನಗದನ್ನು ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ.

ಬಂಧಿತರನ್ನು ಮೊಹಮದ್ ಅಜರುದ್ದೀನ್(24), ಅಬುಬಕರ್ ಸಿದ್ದಿಖ್(33), ಹಸೇನರ್ ಅಲಿಯಾಸ್ ಅಚ್ಚು(27), ಇರ್ಷಾದ್ ಅಲಿ(27), ಎ.ಎ.ಸಮೀರ್(28) ಹಾಗೂ ಓರ್ವ ಕಾಲೇಜು ವಿದ್ಯಾರ್ಥಿನಿ ಕೂಡ ಬಂಧನಕ್ಕೆ ಒಳಗಾಗಿದ್ದಾಳೆ. ಬಂಧಿತ ಆರೋಪಿಗಳಿಂದ 1ಲಕ್ಷ ರೂ. ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ ಒಟ್ಟು 10 ಮಂದಿ ಶಾಮೀಲಾಗಿದ್ದು, ಪ್ರಮುಖ ಆರೋಪಿ ಸೇರಿದಂತೆ ನಾಲ್ವರ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಡಿ. ಪನ್ನೇಕರ್ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ …

ದುಬೈನಲ್ಲಿದ್ದ ನಾಪೋಕ್ಲು ಎಮ್ಮೆಮಾಡು ನಿವಾಸಿ ಗಫೂರ್ ಎಂಬುವವರು ಆಗಸ್ಟ್ ತಿಂಗಳಿನಲ್ಲಿ ತಮ್ಮ ಊರಿಗೆ ಬಂದಿದ್ದರು. ಹೊಸ ಮನೆಯನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದ ಅವರ ಬಳಿ ಹಣ ಇರುವ ಬಗ್ಗೆ ಮಾಹಿತಿ ತಿಳಿದ ಎಮ್ಮೆಮಾಡು ನಿವಾಸಿ ಕರೀಂ ಎಂಬಾತ ಸ್ಥಳೀಯ ಯುವಕರನ್ನು ಸಂಪರ್ಕಿಸಿ ಗಫೂರ್ ಬಳಿಯಿದ್ದ ಹಣವನ್ನು ಲಪಟಾಯಿಸಲು ಸಂಚು ಹೂಡಿದ್ದರು. ಅದರಂತೆ ಆಗಸ್ಟ್ 16ರಂದು ಗಫೂರ್ ಅವರನ್ನು ಕರೆದುಕೊಂಡು ಮನೆ ಬಳಕೆಯ ಎಲೆಕ್ಟ್ರಿಕಲ್ ವಸ್ತುಗಳನ್ನು ಖರೀದಿಸಲು ಮೈಸೂರಿಗೆ ತೆರಳುವಂತೆ ಆರೋಪಿಗಳು ಮನವೊಲಿಸಿದ್ದರು. ಅದರಂತೆ ಕರೀಂ ಮತ್ತು ಅಜರುದ್ದೀನ್ ಅವರುಗಳು ಗಫೂರ್ ಅವರನ್ನು ಕರೆದುಕೊಂಡು ಮೈಸೂರಿಗೆ ತೆರಳುವಾಗ ಮೊದಲೇ ಸಂಚು ರೂಪಿಸಿದಂತೆ ಆರೋಪಿಗಳು ಕುಶಾಲನಗರದಿಂದ ಕಾಲೇಜು ಯುವತಿಯೊಬ್ಬಳನ್ನು ಜೊತೆಗೆ ಕರೆದುಕೊಂಡರು. ಮೈಸೂರಿಗೆ ತಲುಪಿದ ಬಳಿಕ ಕತ್ತಲಾದ ಕಾರಣ ಮೈಸೂರಿನ ರಿಂಗ್ ರೋಡ್‌ನ ಹೋಂ ಸ್ಟೇ ಯಲ್ಲಿ ವಿಶ್ರಾಂತಿ ಪಡೆಯುವಂತೆ ಹೇಳಿ, ಯುವತಿ ಮತ್ತು ಗಫೂರ್ ಅವರನ್ನು ಆರೋಪಿಗಳು ಅಲ್ಲಿಗೆ ಕರೆದೊಯ್ದಿದ್ದರು. ಈ ಸಂದರ್ಭ ಗಫೂರ್ ಅವರಿಗೆ ಅಮಲು ಬರುವ ಪದಾರ್ಥವನ್ನು ನೀಡಿದ್ದರು.

ಮೊದಲೇ ನಿರ್ಧರಿಸಿದಂತೆ ಕೆಲವು ಸಮಯದ ಬಳಿಕ ಉಳಿದ ಆರೋಪಿಗಳು ಗಫೂರ್ ಮತ್ತು ಯುವತಿ ಉಳಿದುಕೊಂಡಿದ್ದ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ನಾವು ಪತ್ರಿಕಾ ಮಾಧ್ಯಮದವರೆಂದು ಹೇಳಿಕೊಂಡು ಗಫೂರ್ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಗಫೂರ್ ಮತ್ತು ಯುವತಿಯನ್ನು ಜೊತೆಯಲ್ಲಿ ನಿಲ್ಲಿಸಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ.

ನಂತರ ಗಫೂರ್ ಬಳಿಯಿದ್ದ60 ಸಾವಿರ ರೂ. ನಗದು ಮತ್ತು 55 ಸಾವಿರ ಮುಖ ಬೆಲೆಯ ಫಾರಿನ್ ಕರೆನ್ಸಿಯನ್ನು, ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ. ಮಾತ್ರವಲ್ಲದೇ 50 ಲಕ್ಷ ರೂ. ಗಳನ್ನು ತಕ್ಷಣ ನೀಡದಿದ್ದಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಟಿವಿ ಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಗಫೂರ್ ತಮ್ಮ ಬಳಿಯಿದ್ದ 3 ಲಕ್ಷ ರೂ. ಮತ್ತು ಮನೆಯಿಂದ ಹಣವನ್ನು ತರಿಸಿಕೊಂಡು ಒಟ್ಟು 3.80 ಲಕ್ಷ ರೂ. ಗಳನ್ನು ಆರೋಪಿಗಳಿಗೆ ನೀಡಿದ್ದಾರೆ. ನಂತರ ಆರೋಪಿಗಳು ಗಫೂರ್ ಅವರನ್ನು ಬಿಟ್ಟು ಕಳುಹಿಸಿದ್ದರು.

ಒಂದು ತಿಂಗಳ ಹಿಂದೆ ಹನಿಟ್ರ್ಯಾಪ್ ಪ್ರಕರಣ ನಡೆದಿರುವ ಬಗ್ಗೆ ಜಿಲ್ಲಾ ಅಪರಾಧ ಪ್ತತೆದಳಕ್ಕೆ ಖಚಿತ ಮಾಹಿತಿ ದೊರಕಿತ್ತು. ಇದನ್ನು ಆಧರಿಸಿ ತನಿಖೆ ನಡೆಸಿದ ಅಪರಾಧ ಪತ್ತೆ ದಳ ನಾಪೋಕ್ಲುವಿನ ಎಮ್ಮೆಮಾಡು ನಿವಾಸಿ ಗಫೂರ್ ಅವರು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ.

ಗಫೂರ್ ಅವರ ಮನವೊಲಿಸಿದ ಪೊಲೀಸರು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ 10ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಅಪರಾಧ ಪತ್ತೆ ದಳ 10 ಮಂದಿ ಆರೋಪಿಗಳ ಪೈಕಿ6 ಮಂದಿಯನ್ನು ಬಂಧಿಸಿದೆ. ಬಂಧಿತ ಆರೋಪಿಗಳು ಎಮ್ಮೆಮಾಡು ನಿವಾಸಿಗಳಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಕಲಂ120(ಬಿ), 328 ,384, 395, ಮತ್ತು 149 ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇತರ 4 ಮಂದಿ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಪೊಲೀಸರಿಗೆ ಗುಂಡು

ಪ್ರಕರಣದ ಬಯಲಾಗುತ್ತಿದ್ದಂತೆಯೇ ಪ್ರಮುಖ ಆರೋಪಿ ಕರೀಂನನ್ನು ಬಂಧಿಸಲು ಜಿಲ್ಲಾ ಅಪರಾಧ ಪತ್ತೆ ದಳದ ಸಹಾಯಕ ನಿರೀಕ್ಷಕ ಮತ್ತು ಇತರ 4 ಮಂದಿ ಸಿಬ್ಬಂದಿಗಳು ಕರೀಂನ ಮನೆಗೆ ತೆರಳಿದ್ದರು. ಬಂಧನದ ಮಾಹಿತಿ ಅರಿತ ಕರೀಂ ಮನೆಯೊಳಗಿದ್ದ ಬಂದೂಕಿನಿಂದ ಪೊಲೀಸರ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದು, ಪೊಲೀಸ್ ಸಹಾಯಕ ನಿರೀಕ್ಷಕ ಹಮೀದ್ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಗುಂಡು ಪಕ್ಕದಲ್ಲಿದ್ದ ತಡೆಗೋಡೆಗೆ ಬಡಿದಿದ್ದು, ಬಳಿಕ ಕರೀಂ ತನ್ನ ಇಬ್ಬರು ಹೆಂಡತಿಯರ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರಿಗೆ ಗುಂಡು ಹೊಡೆಯುವಂತೆ ಆತನ ಪತ್ನಿಯೇ ಕೋವಿಯನ್ನು ತಂದು ಕೊಟ್ಟಿದ್ದು, ಈ ಕುರಿತು ಪ್ರತ್ಯೇಕ ಪ್ರಕರಣವೂ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ದುರ್ಬಳಕೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕರೀಂ ಮತ್ತು ಆತನ ಇಬ್ಬರು ಪತ್ನಿಯರು ಕೂಡ ಆರೋಪಿಗಳಾಗಿದ್ದು, ಪ್ರಸ್ತುತ ತಲೆ ಮರೆಸಿಕೊಂಡಿದ್ದಾರೆ. ಕರೀಂ 2015 ರಲ್ಲಿ ನಡೆದ ಟಿಪ್ಪು ಗಲಭೆಯಲ್ಲೂ ಪ್ರಮುಖ ಪಾತ್ರ ವಹಿಸಿರುವ ಆರೋಪದಲ್ಲಿ ಪ್ರಕರಣವೂ ದಾಖಲಾಗಿದೆ. ಆತನ ಹಿನ್ನಲೆಯನ್ನು ಕೂಡ ತನಿಖೆ ನಡೆಸಲಾಗುತ್ತಿದ್ದು, ಆತನ ಬಂಧನದ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!