ಹತ್ರಾಸ್ ರೀತಿಯ ಮತ್ತೊಂದು ಪ್ರಕರಣ: ಸಾಮೂಹಿಕ ಅತ್ಯಾಚಾರಕ್ಕೀಡಾದ 15 ವರ್ಷದ ದಲಿತ ಬಾಲಕಿ ಆತ್ಮಹತ್ಯೆ

ಚಿತ್ರಕೂಟ: ಮೂವರು ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೀಡಾಗಿದ್ದ ದಲಿತ ಹರೆಯದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಣಿಕ್ ಪುರ ಪ್ರದೇಶದಲ್ಲಿ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದ 15 ವರ್ಷದ ಬಾಲಕಿ ನಿನ್ನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚಿತ್ರಕೂಟ ಎಸ್ಪಿ ಅಂಕಿತ್ ಮಿತ್ತಲ್ ತಿಳಿಸಿದ್ದಾರೆ.

ಬಾಲಕಿಯ ಸಾವಿನ ನಂತರ ಆಕೆಯ ಕುಟುಂಬಸ್ಥರು, ಕಳೆದ ಅಕ್ಟೋಬರ್ 8ರಂದು ಆಕೆಯ ಮೇಲೆ ಮೂವರು ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದಾರೆ. ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಗ್ರಾಮದ ಮಾಜಿ ಮುಖ್ಯಸ್ಥನ ಪುತ್ರ ಕಿಶನ್ ಉಪಾಧ್ಯಾಯ ಮತ್ತು ಇತರ ಇಬ್ಬರಾದ ಆಶಿಶ್ ಮತ್ತು ಸತೀಶ್ ಎಂಬುವವರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದಾರೆ.

ಬಾಲಕಿ ನೀಡಿದ ದೂರನ್ನು ಪೊಲೀಸರು ಸ್ವೀಕರಿಸಿ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಳ್ಳದಿದ್ದ ಕಾರಣ ಬಾಲಕಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಬಸ್ಥರು ಆರೋಪಿಸಿದ್ದರೆ, ಪೊಲೀಸರು ಕುಟುಂಬಸ್ಥರು ಯಾವುದೇ ದೂರು ಅರ್ಜಿ ನೀಡಿರಲಿಲ್ಲ, ಹೀಗಾಗಿ ಎಫ್ಐಆರ್ ದಾಖಲಿಸಿಕೊಳ್ಳಲಿಲ್ಲ ಎಂದಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದ ಬಗ್ಗೆ ದೃಢಪಟ್ಟಿಲ್ಲ, ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರವಾಗಿ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವುದರ ಮಧ್ಯೆಯೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!